ADVERTISEMENT

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ: ಸರ್ಕಾರದ ಅಸ್ತು

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 12:25 IST
Last Updated 12 ಜನವರಿ 2012, 12:25 IST

ನವದೆಹಲಿ (ಪಿಟಿಐ): ರಾಷ್ಟ್ರದಲ್ಲಿನ ಎಲ್ಲ ಭಯೋತ್ಪಾದನೆ ವಿರೋಧಿ ಚಟುವಟಿಕೆಗಳಿಗೆ ಮಧ್ಯವರ್ತಿ ಸಂಸ್ಥೆಯಾಗಿ (ನೋಡಾಲ್ ಏಜೆನ್ಸಿ) ಕೆಲಸ ಮಾಡುವಂತಹ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್ ಸಿ ಟಿ ಸಿ) ಸ್ಥಾಪನೆಗೆ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿತು.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯು (ಸಿಸಿಎಸ್) ಒಂದು ಗಂಟೆಗೂ ಹೆಚ್ಚಿನ ಸುದೀರ್ಘ ಚರ್ಚೆಯ ಬಳಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ತನ್ನ ಒಪ್ಪಿಗೆ ನೀಡಿತು. ಈ ಕೇಂದ್ರವು ಭಯೋತ್ಪಾದನೆ ಸಂಬಂಧಿಸಿ ಜಾಗೃತಾ ಸಂಸ್ಥೆಗಳನ್ನು ಸುವ್ಯವಸ್ಥಿತವನ್ನಾಗಿ ಮಾಡಿ, ವಿಶ್ಲೇಷಿಸಿ ಸಂಬಂಧ ಪಟ್ಟ ಸಂಸ್ಥೆಗೆ ಕಾರ್ಯಯೋಜನೆಯನ್ನು ಒದಗಿಸುವುದು ಎಂದು ಅಧಿಕೃತ ಮೂಲಗಳು ತಿಳಿಸಿದವು.

ಈ ಯೋಜನೆಯು ಗೃಹ ಸಚಿವ ಪಿ. ಚಿದಂಬರಂ ಅವರ ಪ್ರೀತಿಯ ಯೋಜನೆಯಾಗಿದ್ದು, ಇಂಟಲಿಜೆನ್ಸ್ ಬ್ಯೂರೋ (ಐಬಿ), ಸಂಶೋಧನೆ ಮತ್ತು ವಿಶ್ಲೇಷಣಾ ದಳ (ರಾ), ಜಂಟಿ ಜಾಗೃತಾ ಸಮಿತಿ (ಜೆಐಸಿ) ಮತ್ತು ರಾಜ್ಯ ಜಾಗೃತಾ ಸಂಸ್ಥೆಗಳಂತಹ ಜಾಗೃತಾ ಸಂಸ್ಥೆಗಳ ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ~ಮಧ್ಯವರ್ತಿ ಸಂಸ್ಥೆ~ಯಾಗಿ ಕಾರ್ಯ ನಿರ್ವಹಿಸುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.