ನವದೆಹಲಿ (ಪಿಟಿಐ): ಭಾರತೀಯ ಕಂದಾಯ ಅಧಿಕಾರಿಯಾಗಿದ್ದಾಗ (ಐಆರ್ಎಸ್) ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾ ಬಳಗದ ಅರವಿಂದ್ ಕೇಜ್ರಿವಾಲ್ ಅವರಿಗೆ ಆದಾಯ ತೆರಿಗೆ ಇಲಾಖೆ ಮತ್ತೊಂದು ನೋಟಿಸ್ ಜಾರಿಗೊಳಿಸಿದೆ.
ಬಾಕಿ ಇರುವ 9 ಲಕ್ಷ ರೂಪಾಯಿಗಳನ್ನು ಇದೇ ತಿಂಗಳ ಕೊನೆಯೊಳಗೆ ಪಾವತಿಸಲು ನೋಟಿಸ್ನಲ್ಲಿ ಗಡುವು ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಆಯುಕ್ತರು ಆ.5ರಂದು ಕೇಜ್ರಿವಾಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು.
ನವೆಂಬರ್ 2000- 2002ರ ಅವಧಿಯಲ್ಲಿ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದ್ದ ವೇಳೆ ಬರೆದುಕೊಟ್ಟಿದ್ದ ಮುಚ್ಚಳಿಕೆಯಲ್ಲಿನ ಕೆಲವು ಅಧಿನಿಯಮಗಳನ್ನು ಉಲ್ಲಂಘಿಸಿದ ಆರೋಪವನ್ನು ಕೇಜ್ರಿವಾಲ್ ಮೇಲೆ ಹೊರಿಸಲಾಗಿದೆ. ಅದಕ್ಕೂ ಮುನ್ನ, 2007-08ರಲ್ಲಿ ದೆಹಲಿಯ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರು ಈ ಸಂಬಂಧ ಕೇಜ್ರಿವಾಲ್ಗೆ ಬರೆದಿದ್ದಾಗ, ಈ ಹಣವನ್ನು ಮನ್ನಾ ಮಾಡಬಹುದು ಎಂದು ಅವರು ಪ್ರತ್ಯುತ್ತರ ನೀಡಿದ್ದರು.
ಈಗ ನೀಡಿರುವ ನೋಟಿಸ್ಗೆ ಸೂಕ್ತ ಸ್ಪಷ್ಟನೆ ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಹೋರಾಟಗಾರನ ದನಿಯನ್ನು ದಮನಿಸಲು ಸರ್ಕಾರ ಹೂಡಿರುವ ಕೀಳು ಮಟ್ಟದ ತಂತ್ರ ಇದಾಗಿದೆ ಎಂದು ಅಣ್ಣಾ ತಂಡದ ಸದಸ್ಯರು ಹಾಗೂ ಸ್ವತಃ ಕೇಜ್ರಿವಾಲ್ ಆಪಾದಿಸಿದ್ದಾರೆ.
`ಮುಚ್ಚಳಿಕೆಯ ಯಾವುದೇ ಅಧಿನಿಯಮವನ್ನು ನಾನು ಉಲ್ಲಂಘಿಸಿಲ್ಲ. ಅಧ್ಯಯನ ರಜೆ ಮುಗಿಸಿ ಪುನಃ ಕೆಲಸಕ್ಕೆ ಸೇರಿಕೊಂಡು ನಿಗದಿತ ಮೂರು ವರ್ಷ ಕೆಲಸ ಮಾಡಿ, ನಂತರವಷ್ಟೇ ರಾಜೀನಾಮೆ ನೀಡಿದ್ದೇನೆ~ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.