ADVERTISEMENT

ರೈಲು ದರ ಏರಿಕೆಗೆ ಪ್ರಶ್ನೋತ್ತರ ಕಲಾಪ ಬಲಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ರೈಲು ಪ್ರಯಾಣ ದರ ಏರಿಕೆ ಬಿಕ್ಕಟ್ಟು ಪ್ರಕರಣವು ಗುರುವಾರ ಸದನದ ಪ್ರಶ್ನೋತ್ತರ ಕಲಾಪವನ್ನು ಬಲಿ ತೆಗೆದುಕೊಂಡಿತು.

ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ನಾಯಕರಾದ ಸುಷ್ಮಾ ಸ್ವರಾಜ್, ಶರದ್ ಯಾದವ್ (ಜೆಡಿಯು), ಸಿಪಿಎಂ ನ ಬಸುದೇವ್ ಆಚಾರ್ಯ, ಸಿಪಿಐ ನ ಗುರುದಾಸ್ ದಾಸ್‌ಗುಪ್ತ ಅವರು ಪಶ್ನೋತ್ತರ ಅವಧಿ ರದ್ದುಗೊಳಿಸಿ ರೈಲ್ವೆ ಪ್ರಯಾಣ ದರ ಏರಿಕೆ ಬಿಕ್ಕಟ್ಟಿನ ಕುರಿತು ಸರ್ಕಾರ ವಿವರಣೆ ನೀಡಬೇಕೆಂದು ಒತ್ತಾಯಿಸಿ ನೋಟಿಸ್‌ಗಳನ್ನು ನೀಡಿದರು.

ಆದರೆ ಈ ನೋಟಿಸ್‌ಗಳನ್ನು ಮಾನ್ಯ ಮಾಡದ ಸ್ಪೀಕರ್ ಮೀರಾ ಕುಮಾರ್, ಈ ಕುರಿತು ಅವರಿಗೆ ಕೇವಲ ಮಾತನಾಡಲು ಅವಕಾಶ ನೀಡಿದರು. ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಹಿರಿಯ ಸಚಿವರು ಕೂರುವ ಮೊದಲ ಸಾಲಿನಲ್ಲಿ ತ್ರಿವೇದಿ ಕುಳಿತಿದ್ದರು.

ADVERTISEMENT

ಪ್ರಶ್ನೋತ್ತರ ಅವಧಿಯಲ್ಲಿ  ಉತ್ತರ ನೀಡಲೆಂದು ಅವರ ಹೆಸರಿನ ಎದುರು ಪಶ್ನೆಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಸ್ಪೀಕರ್ ಅವರು ಪ್ರಶ್ನೋತ್ತರ ಅವಧಿ ನಡೆಸಲು ಮುಂದಾಗುತ್ತಿದ್ದಂತೆ, ಬಿಜೆಪಿ ಸದಸ್ಯರು ಅವರ ಆಸನದ ಮುಂದಕ್ಕೆ ನುಗ್ಗಿ ಪ್ರಧಾನಿ ಅವರಿಂದ ಹೇಳಿಕೆಗೆ ಆಗ್ರಹಿಸಿ ಗದ್ದಲ ಮಾಡಿದರು. ಆಗ ಸ್ಪೀಕರ್ ಅವರು ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.