ನವದೆಹಲಿ: ಮಹಾತ್ಮಗಾಂಧಿ ಅವರನ್ನು ರೈಲಿನಿಂದ ಹೊರದಬ್ಬಿ 125 ವರ್ಷ ತುಂಬಿದ್ದು, ಈ ದಿನವನ್ನು ವಿಶಿಷ್ಟವಾಗಿ ಆಚರಿಸಲು ದಕ್ಷಿಣ ಆಫ್ರಿಕಾ ನಿರ್ಧರಿಸಿದೆ.
1893ರ ಜೂನ್ 7ರಂದು ಪೀಟರ್ಮಾರಿಜ್ಬರ್ಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ‘ಬಿಳಿಯರಿಗಾಗಿ ಮಾತ್ರ’ ಮೀಸಲಿದ್ದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗಾಂಧಿ, ತಾವು ಕುಳಿತಿದ್ದ ಪ್ರಥಮ ದರ್ಜೆ ಸ್ಥಳವನ್ನು ಬಿಟ್ಟುಕೊಡಲು ನಿರಾಕರಿಸಿದಾಗ ಅವರನ್ನು ರೈಲಿನಿಂದ ಹೊರದಬ್ಬಲಾಗಿತ್ತು. ಹೀಗಾಗಿ ಈ ದಿನದ ಸ್ಮರಣೆಗಾಗಿ ಮಹಾತ್ಮ ಗಾಂಧಿಗೆ ಪ್ರಿಯವಾದ ಖಾದಿ ಬಟ್ಟೆಯನ್ನೇ ಬಳಸಿ 125ನೇ ವರ್ಷ ಆಚರಿಸಲಾಗುತ್ತಿದೆ.
ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನ ಕೆಲ ಭಾಗ, ಮುಖ್ಯ ದ್ವಾರ ಹಾಗೂ ಬೋಗಿಗಳನ್ನು ಜೂ.7ರಂದು ಖಾದಿ ಬಟ್ಟೆಯಿಂದ ಅಲಂಕರಿಸುವ ಮೂಲಕ ಮಹಾತ್ಮಗಾಂಧಿಗೆ ಗೌರವ ಸಲ್ಲಿಸಲಾಗುತ್ತಿದೆ.
ಈ ಉದ್ದೇಶಕ್ಕಾಗಿ 40–50 ಮೀ. ನಂತೆ ಒಟ್ಟು 400 ಮೀ. ಉದ್ದ ಹಾಗೂ 36 ಇಂಚು ಅಗಲದ ಖಾದಿ ಬಟ್ಟೆಯನ್ನು ಪೂರೈಸುವಂತೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗಕ್ಕೆ ಪ್ರಿಟೊರಿಯಾದಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮನವಿ ಸಲ್ಲಿಸಿದೆ. ಈ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಳ್ಳುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.