ADVERTISEMENT

ಲಾಮಾಗೆ ಮುಸ್ಲಿಂ ಮೂಲಭೂತವಾದಿಗಳಿಂದ ಬೆದರಿಕೆ

ರಾಜ್ಯಗಳಿಗೆ ಮಾಹಿತಿ ನೀಡಿದ್ದ ಗೃಹ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ನವದೆಹಲಿ: ಟಿಬೆಟನ್ ಧಾರ್ಮಿಕ ಗುರು ದಲೈ ಲಾಮಾ ಅವರನ್ನು ಗುರಿಯಾಗಿರಿಸಿ ಮುಸ್ಲಿಂ ಮೂಲಭೂತವಾದಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ ನಾಲ್ಕು ದಿನಗಳ ಹಿಂದೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಿತ್ತು.

ಮ್ಯಾನ್ಮಾರ್‌ನಲ್ಲಿ ಬೌದ್ಧ ಧರ್ಮೀಯರು ಮತ್ತು ರೋಹಿಂಗ್ಯಾ ಮುಸ್ಲಿಂರ ಮಧ್ಯೆ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮೂಲಭೂತವಾದಿಗಳು, ದಲೈ ಲಾಮಾ ಅವರ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಳ್ಳುವ ಸಂಚು ರೂಪಿಸಿದ್ದಾರೆ. ಆದ್ದರಿಂದ ಲಾಮಾ ಅವರಿಗೆ ಬಿಗಿ ಭದ್ರತೆ ಕಲ್ಪಿಸುವಂತೆ ರಾಜ್ಯಗಳಿಗೆ ಗೃಹ ಸಚಿವಾಲಯ ತಿಳಿಸಿತ್ತು. ಈ ವಿಷಯವನ್ನು ಲಾಮಾ ಕಚೇರಿಯ ಕಾರ್ಯದರ್ಶಿ `ಪ್ರಜಾವಾಣಿ'ಗೆ ದೃಢಪಡಿಸಿದ್ದಾರೆ.

`ದಲೈ ಲಾಮಾ ಅವರ ಭದ್ರತೆಯನ್ನು ಪರಿಶೀಲಿಸಲಾಗಿತ್ತು. ಇದಕ್ಕಿಂತ ಹೆಚ್ಚಿನದೇನೂ ಹೇಳಲಾರೆ. ಈ ಕುರಿತು ಸ್ಥಳೀಯ ಪೊಲೀಸರೊಂದಿಗೆ ಮಾತನಾಡಿ' ಎಂದು ಲಾಮಾ ಕಚೇರಿಯ ಕಾರ್ಯದರ್ಶಿ ಟೆನ್‌ಜಿನ್ ಟೆಕ್ಲಾ ತಿಳಿಸಿದ್ದಾರೆ.

ಲಾಮಾ ಅವರಿಗೆ ಚೀನಾದಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ  `ಝಡ್' ಶ್ರೇಣಿ ಭದ್ರತೆ ಒದಗಿಸಲಾಗಿದೆ. ಆದರೆ, ಇದೀಗ ಅವರಿಗೆ ಮುಸ್ಲಿಂ ಮೂಲಭೂತವಾದಿಗಳ ಬೆದರಿಕೆ ಎದುರಾಗಿದೆ ಎಂದು ಬೇಹುಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಲಾಮಾ ಅವರು ಸದ್ಯ ಬೈಲುಕುಪ್ಪೆಯ ಬೌದ್ಧರ ನಿರಾಶ್ರಿತರ ಶಿಬಿರದಲ್ಲಿ ತಂಗ್ದ್ದಿದಾರೆ. ಬಳಿಕ ಅವರು ಮುಂಡಗೋಡಕ್ಕೆ ತೆರಳಲಿದ್ದಾರೆ. ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಮಾ ಅವರ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾ ದೇಶದಿಂದ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿರುವ ರೋಹಿಂಗ್ಯಾ ಮುಸ್ಲಿಂರಿಗೆ ಮ್ಯಾನ್ಮಾರ್ ಪೌರತ್ವ ನಿರಾಕರಿಸಲಾಗಿದೆ. ಅಲ್ಲದೇ ಬೌದ್ಧ ಧರ್ಮೀಯರು ಮತ್ತು ರೋಹಿಂಗಾ ಮುಸ್ಲಿಂರ ಮಧ್ಯೆ ಜನಾಂಗೀಯ ಸಂಘರ್ಷ ತಾರಕಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.