ADVERTISEMENT

ಲೋಕಸಭೆ: 8 ತೆಲಂಗಾಣ ಕಾಂಗ್ರೆಸ್ ಸದಸ್ಯರ ಅಮಾನತು, ಸದನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:40 IST
Last Updated 24 ಏಪ್ರಿಲ್ 2012, 8:40 IST

ನವದೆಹಲಿ (ಪಿಟಿಐ, ಐಎಎನ್ಎಸ್): ಸದನದಲ್ಲಿ ಕಾರ್ಯಕಲಾಪಕ್ಕೆ ನಿರಂತರ ಅಡೆತಡೆ ಉಂಟು ಮಾಡಿದ್ದಕ್ಕಾಗಿ ತೆಲಂಗಾಣ ಪ್ರದೇಶದ ನಾಲ್ವರು ಕಾಂಗ್ರೆಸ್ ಸಂಸತ್ ಸದಸ್ಯರನ್ನು ಲೋಕಸಭೆ ಮಂಗಳವಾರ ನಾಲ್ಕು ದಿನಗಳ ಅವಧಿಗೆ ಅಮಾನತುಗೊಳಿಸಿತು.

ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಬನ್ಸಲ್ ಅವರು ಈ ಕುರಿತು ಮಂಡಿಸಿದ ನಿರ್ಣಯವನ್ನು ಸದನವು ಧ್ವನಿಮತದಿಂದ ಅಂಗೀಕರಿಸಿತು.

ಅಮಾನತುಗೊಂಡ ಸದಸ್ಯರು: ಪೊನ್ನಂ ಪ್ರಭಾಕರ್, ಮಧು ಯಶ್ಖಿ ಗೌಡ್, ಎಂ. ಜಗನ್ನಾಥ್, ಕೆ.ಆರ್.ಜಿ. ರೆಡ್ಡಿ, ಜಿ. ವಿವೇಕಾನಂದ, ಬಲರಾಂ ನಾಯ್ಕ್, ಸುಕೆಂದ್ರ ರೆಡ್ಡಿ ಗುಥ ಮತ್ತು ಎಸ್ ರಾಜಯ್ಯ.

ಸದನ ಮಧ್ಯಾಹ್ನ ಸಮಾವೇಶಗೊಂಡಾಗ ಗದ್ದಲ ಮುಂದುವರಿದುದನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಯಿತು. ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು

ಇದಕ್ಕೆ ಮುನ್ನ ಬೆಳಗ್ಗೆ ಮೂರುವಾರಗಳ ಬಳಿಕ ಸಮಾವೇಶಗೊಂಡ ಲೋಕಸಭೆ ಆರಂಭದಲ್ಲೇ ಭಾರಿ ಕೋಲಾಹಲವನ್ನು ಕಂಡಿತು. ತೆಲಂಗಾಣ ಪ್ರದೇಶದ ಸದಸ್ಯರು ತಮ್ಮ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ತೀವ್ರ ಗದ್ದಲ ಎಬ್ಬಿಸಿದ್ದರಿಂದಾಗಿ ಸದನವನ್ನು ಮುಂದೂಡಬೇಕಾಗಿ ಬಂದಿತ್ತು.

ಕಲಾಪ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ ಕಲಾಪವನ್ನು ಮಧ್ಯಾಹ್ಬ 12 ಗಂಟೆವರೆಗೆ ಮುಂದೂಡಲಾಯಿತು.

ಸದನ ಆರಂಭಗೊಂಡ ತತ್ ಕ್ಷಣವೇ ಕಾಂಗ್ರೆಸ್ಸಿನ ಮಾಜಿ ಸದಸ್ಯ ಎನ್. ಕೆ. ಪಿ. ಸಾಳ್ವೆ ನಿಧನಕ್ಕೆ ಸಂತಾಪ ಸೂಚಿಸುವ ನಿರ್ಣಯ ಅಂಗೀಕರಿಸಲಾಯಿತು. ನಂತರ ಸಭಾಧ್ಯಕ್ಷೆ ಮೀರಾಕುಮಾರ್ ಅವರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಆದರೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳಿಗೆ ಸೇರಿದ ತೆಲಂಗಾಣ ಪ್ರದೇಶದ ಸದಸ್ಯರು ತೆಲಂಗಾಣ ವಿಷಯವನ್ನೆತ್ತಿ ಘೋಷಣೆಗಳನ್ನು ಕೂಗಲಾರಂಭಿಸಿದರು.

ಪ್ರಶ್ನೋತ್ತರ ಕಲಾಪ ಮುಗಿಸಲು ಅನುವು ಮಾಡಿಕೊಡುವಂತೆ ಸಭಾಧ್ಯಕ್ಷರು ಪದೇ ಪದೇ ಮಾಡಿದ ಮನವಿಗಳಿಗೆ ಸದಸ್ಯರು ಸ್ಪಂದಿಸಲಿಲ್ಲ. ಕೆಲವರು ಸಭಾಧ್ಯಕ್ಷರ ಆಸನದ ಕಡೆಗೂ ನುಗ್ಗಿದರು. ತಮ್ಮ ಆಸನಗಳತ್ತ ಹಿಂದಿರುಗುವಂತೆ ಮಾಡಿದ ಮನವಿಗೆ ಓಗೊಡದೇ ಇದ್ದಾಗ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಆದರೆ ಮಧ್ಯಾಹ್ನ ಕಲಾಪ ಆರಂಭಗೊಂಡಾಗಲೂ ಪರಿಸ್ಥಿತಿ ಹಾಗೆಯೇ ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.