ವಿಜಯವಾಡ: ಇಲ್ಲಿನ ಇಬ್ರಾಹಿಂಪಟ್ಟಣಂ ಬಳಿ ಕೃಷ್ಣಾ ನದಿಯಲ್ಲಿ ದೋಣಿ ಮಗುಚಿ 11 ಮಂದಿ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಭಾನುವಾರ ಸಂಜೆ 4 ಗಂಟೆಗೆ ಈ ದುರಂತ ಸಂಭವಿಸಿದ್ದು, ಈಗಾಗಲೇ 9 ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ.
ಓನ್ಗೋಲ್ ವಾಕರ್ಸ್ ಕ್ಲಬ್ನ 38 ಸದಸ್ಯರು ಈ ದೋಣಿಯಲ್ಲಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ದೋಣಿಯಲ್ಲಿ ಒಟ್ಟು ಎಷ್ಟು ಜನ ಇದ್ದರು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ರಕ್ಷಿಸಲ್ಪಟ್ಟ ಮಂದಿ ಹೇಳುವ ಪ್ರಕಾರ ದೋಣಿಯಲ್ಲಿ 38 ಮಂದಿ ಇದ್ದರು. ಓನ್ಗೋಲ್ ವಾಕಿಂಗ್ ಕ್ಲಬ್ನ ಸದಸ್ಯರೂ ಆದ 8 ಕುಟುಂಬಗಳ ಸದಸ್ಯರು ಬೋಟ್ ಪಯಣ ಕೈಗೊಂಡಿದ್ದರು. ಈಗಾಗಲೇ 11 ಮಂದಿಯ ಮೃತದೇಹ ಪತ್ತೆಯಾಗಿದ್ದು, 20 ಮಂದಿಯನ್ನು ರಕ್ಷಿಸಲಾಗಿದೆ.
ಈ ಪ್ರವಾಸಿಗರು ಭವಾನಿ ದ್ವೀಪದಿಂದ ವಿಜಯವಾಡ ಬಳಿ ಇರುವ ಸಂಗಮ್ಗೆ ದೋಣಿ ಯಾತ್ರೆ ಕೈಗೊಂಡಿದ್ದರು. ದೋಣಿಯಲ್ಲಿದ್ದ ಯಾರೊಬ್ಬರೂ ಲೈಫ್ ಜಾಕೆಟ್ ಧರಿಸಿರಲಿಲ್ಲ. ಸುರಕ್ಷಾ ಕ್ರಮಗಳನ್ನು ಸ್ವೀಕರಿಸದೇ ಇರುವ ಬೋಟ್ ಆಪರೇಟರ್ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಆಂಧ್ರಪ್ರದೇಶದ ಗೃಹ ಸಚಿವ ಎನ್. ಚಿನ್ನಪ್ಪ ಹೇಳಿದ್ದಾರೆ.
ಬಲ್ಲಮೂಲಗಳ ಪ್ರಕಾರ ಓನ್ಗೋಲ್ ವಾಕರ್ಸ್ ಕ್ಲಬ್ ಸದಸ್ಯರು ಸಿಂಪಲ್ ವಾಟರ್ ಟೂರ್ಸ್ ಎಂಬ ಬೋಟ್ ಆಪರೇಟರ್ಗಳಿಂದ ದೋಣಿ ಬಾಡಿಗೆ ಪಡೆದಿದ್ದರು, ಓನ್ಗೋಲ್ ನಿಂದ ವಿಜಯವಾಡಕ್ಕೆ ಪ್ರವಾಸಕ್ಕಾಗಿ ಬಂದ ಈ ಪ್ರವಾಸಿಗರು ವಿವಿಧ ದೇವಸ್ಥಾನಗಳನ್ನು ಸಂದರ್ಶಿಸಿದ ನಂತರ ಸ್ಥಳ ವೀಕ್ಷಣೆಗಾಗಿ ಇಬ್ರಾಹಿಂಪಟ್ಟಣಂನಿದ ದೋಣಿ ಯಾತ್ರೆ ಆರಂಭಿಸಿದ್ದರು.
ಪ್ರಯಾಣಿಕರು ಲೈಫ್ ಜಾಕೆಟ್ ಕೇಳಿದ್ದರೂ, ಏನೂ ಆಗಲ್ಲ ಎಂದು ಬೋಟ್ ಆಪರೇಟರ್ಗಳು ಹೇಳಿದ್ದರು, ದೋಣಿ ಮರಳುದಿಣ್ಣೆಗೆ ಬಡಿದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ದೋಣಿಯಲ್ಲಿದ್ದ ಹೆಚ್ಚಿನ ಮಹಿಳೆಯರಿಗೆ ಈಜಲು ಬರುತ್ತಿರುತ್ತಿರಲಿಲ್ಲ. ದುರಂತ ಸಂಭವಿಸಿದೊಡನೆ ಅಲ್ಲಿನ ಮೀನುಗಾರರು ಕೆಲವರನ್ನು ರಕ್ಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.