ಗಾಂಧಿನಗರ (ಪಿಟಿಐ): ಗುಜರಾತ್ನ 16ನೇ ಮುಖ್ಯಮಂತ್ರಿಯಾಗಿ ವಿಜಯ ರೂಪಾಣಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ತಮ್ಮ ಸಂಪುಟಕ್ಕೆ 24 ಮಂದಿಯನ್ನು ಅವರು ಸೇರಿಸಿಕೊಂಡಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಸಂಪುಟದಲ್ಲಿ ಸಚಿವರಾಗಿದ್ದ ಒಂಬತ್ತು ಮಂದಿಯನ್ನು ರೂಪಾಣಿ ಕೈಬಿಟ್ಟಿದ್ದಾರೆ. ಇವರೆಲ್ಲರೂ ಆನಂದಿಬೆನ್ ಅವರಿಗೆ ನಿಷ್ಠರಾಗಿದ್ದವರು ಎನ್ನಲಾಗಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್ನಲ್ಲಿ ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿದೆ. ನಿತಿನ್ ಪಟೇಲ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಸಂಪುಟದಲ್ಲಿ ಎಲ್ಲ ಪ್ರಮುಖ ಜಾತಿಗಳಿಗೆ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಳ್ಳಲಾಗಿದೆ. ಪಟೇಲ್ ಸಮುದಾಯದ ಎಂಟು, ಇತರ ಹಿಂದುಗಳಿದ ವರ್ಗಕ್ಕೆ ಸೇರಿದ ಎಂಟು, ಕ್ಷತ್ರಿಯ ಸಮುದಾಯದ ಮೂರು, ಬುಡಕಟ್ಟು ಸಮುದಾಯದ ಇಬ್ಬರು, ಬ್ರಾಹ್ಮಣ, ಜೈನ, ಸಿಂಧಿ ಮತ್ತು ದಲಿತ ಸಮುದಾಯದ ತಲಾ ಒಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಎಂಟು ಮಂದಿ ಸಂಪುಟ ಸಚಿವರಾಗಿದ್ದರೆ 16 ಮಂದಿ ರಾಜ್ಯ ದರ್ಜೆಯ ಸಚಿವರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಪಕ್ಷದ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಹರ್ಷವರ್ಧನ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್, ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್, ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸೋಮವಾರ ಖಾತೆ ಹಂಚಿಕೆ ನಡೆಯಲಿದೆ ಎಂದು ಕಾರ್ಯಕ್ರಮದ ನಂತರ ಮಾಧ್ಯಮದ ಜತೆ ಮಾತನಾಡಿದ ರೂಪಾಣಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.