ನವದೆಹಲಿ: ಚೆನ್ನೈ ವಿಮಾನನಿಲ್ದಾಣದಲ್ಲಿ ನಮ್ಮನ್ನು ವಿವಸ್ತ್ರಗೊಳಿಸಿ, ತಪಾಸಣೆಗೊಳಪಡಿಸಲಾಗಿದೆ ಎಂದು ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಯ ಕೆಲ ಗಗನಸಖಿಯರು ಆರೋಪಿಸಿರುವ ವಿಡಿಯೊವೊಂದು ವೈರಲ್ ಆಗಿದೆ.
ವಿಮಾನದೊಳಗೆ ಆಹಾರ ಮತ್ತು ಇತರ ಪದಾರ್ಥಗಳನ್ನು ಮಾರಾಟ ಮಾಡಿ ಬಂದ ದುಡ್ಡನ್ನು ಕದ್ದಿರಬಹುದು ಎಂದು ನಮ್ಮನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆದರೆ ಸ್ಪೈಸ್ಜೆಟ್ ಈ ಆರೋಪ ನಿರಾಕರಿಸಿದೆ. ಮಾರ್ಚ್ 28 ಮತ್ತು 29ರ ರಾತ್ರಿ ಭದ್ರತಾ ತಂಡಗಳು ಭದ್ರತೆ ಮತ್ತು ಸುರಕ್ಷತೆ ಕಾರ್ಯಾಚರಣೆ ವಿಧಾನಗಳ (ಎಸ್ಒಪಿ) ಪ್ರಕಾರ ತಪಾಸಣೆ ನಡೆಸಿವೆ. ಆದರೆ ವಿವಸ್ತ್ರಗೊಳಿಸಿ ತಪಾಸಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ತಪಾಸಣೆ ವೇಳೆ ಎಸ್ಒಪಿ ಉಲ್ಲಂಘನೆಯಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು. ವಿವಸ್ತ್ರಗೊಳಿಸಿ ತಪಾಸಣೆ ಮಾಡಿರುವುದು ನಿಜವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಸಿಬ್ಬಂದಿ ಹಣ ಮತ್ತು ವಸ್ತುಗಳ ಕಳ್ಳತನ ಮಾಡುವುದು, ಆಮಿಷಕ್ಕೆ ಒಳಗಾಗಿ ಕಳ್ಳಸಾಗಣೆ ಅಥವಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಲು ತಪಾಸಣೆ ಮಾಡಲಾಗುತ್ತದೆ. ಇದು ಪ್ರಯಾಣಿಕರು, ಸಿಬ್ಬಂದಿ ಮತ್ತು ಸಂಸ್ಥೆಯ ಆಸ್ತಿಯ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಒಬ್ಬ ಪ್ರಯಾಣಿಕನನ್ನು ಯಾವ ರೀತಿ ತಪಾಸಣೆ ಮಾಡಲಾಗುತ್ತದೋ ಅದೇ ರೀತಿ ಸಿಬ್ಬಂದಿಯನ್ನೂ ತಪಾಸಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಎಲ್ಲ ನಿಯಮಗಳನ್ನು ಪಾಲಿಸಿ, ಬಾಗಿಲು ಮುಚ್ಚಿದ ಕೊಠಡಿಗಳಲ್ಲಿ ತರಬೇತಿ ಪಡೆದ ಮಹಿಳಾ ಭದ್ರತಾ ಸಿಬ್ಬಂದಿಯಿಂದಲೇ ಗಗನಸಖಿಯರ ತಪಾಸಣೆ ಮಾಡಿಸಲಾಗಿದೆ. ತಪಾಸಣೆ ವೇಳೆ ಕೆಲ ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.