ADVERTISEMENT

ವಿವಾದಾತ್ಮಕ ಹೇಳಿಕೆ: ಫಾರುಖ್ ಅಬ್ದುಲ್ಲಾ ವಿಷಾದ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:28 IST
Last Updated 6 ಡಿಸೆಂಬರ್ 2013, 10:28 IST

ನವದೆಹಲಿ(ಪಿಟಿಐ): ಸಹೋದ್ಯೋಗಿ ಮೇಲೆ ಲೈಂಗಿಕ ಹಲ್ಲೆ ಎಸಗಿದ ಆರೋಪ ಎದುರಿಸುತ್ತಿರುವ ತೆಹೆಲ್ಕಾ ನಿಯತಕಾಲಿಕೆ ಸಂಪಾದಕ ತರುಣ್ ತೇಜ್‌ಪಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಫಾರುಖ್ ಅಬ್ದುಲ್ಲಾ ಕೆಲ ಗಂಟೆಗಳಲ್ಲೇ ಇದಕ್ಕಾಗಿ ವಿಷಾದ ವ್ಯಕ್ತ ಪಡಿಸಿದರು.

‘ಪ್ರಸ್ತುತ ದಿನಗಳಲ್ಲಿ ಮಹಿಳೆಯರು, ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಯುವತಿಯರ ಜತೆ ಮಾತನಾಡಲು ಭಯವಾಗುತ್ತದೆ. ಆದ್ದರಿಂದ, ನಾನು ಮಹಿಳಾ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳುವ ಬಗ್ಗೆ ಯೋಚಿಸಿಲ್ಲ’ ಎಂಬ ಹೇಳಿಕೆ ನೀಡಿ ಫಾರುಕ್ ಅಬ್ದುಲ್ಲಾ ವಿವಾದ ಹುಟ್ಟು ಹಾಕಿದ್ದರು.

ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಫಾರುಖ್ ಅವರ ಹೇಳಿಕೆಯನ್ನು ತತ್ ಕ್ಷಣವೇ ಖಂಡಿಸಿದ್ದವು. ಜತೆಗೆ, ಅಬ್ದುಲ್ಲಾ ಅವರ ಪುತ್ರ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ಈ ಹೇಳಿಕೆಗಾಗಿ ತಂದೆಯವರು ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದರು.

‘ಯುವತಿಯರನ್ನು ದೂಷಿಸುವ ಉದ್ದೇಶ ನನಗಿಲ್ಲ. ಆ ದೃಷ್ಟಿಯಿಂದ ಹೇಳಿಕೆ ನೀಡಿಲ್ಲ. ಬದಲಿಗೆ, ಸಮಾಜವನ್ನು ದೃಷ್ಟಿಯಲ್ಲಿಕೊಂಡು ಹೇಳಿದ್ದೇನೆ. ಯುವತಿಯರು ಹೇಳುವ ದೂರನ್ನಷ್ಟೇ ಗಮನಿಸುವ ಮಟ್ಟಕ್ಕೆ ಸಮಾಜ ಬಂದಿದೆ. ಪ್ರಸ್ತುತ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದೆ. ಗಂಡು ಮಕ್ಕಳು ಜನಿಸಲಿ ಎಂದು ಪ್ರಾರ್ಥಿಸುತ್ತಾರೆ. ಹೆಣ್ಣು ಜನಿಸಿದರೆ ಅಳುವ ಸ್ಥಿತಿ ಸಮಾಜದಲ್ಲಿದೆ’ ಎಂದು ಅಬ್ದುಲ್ಲಾ ಹೇಳಿದರು.

‘ಏನಾದರೂ ತಪ್ಪಾಗಿದ್ದರೆ ನಾನು ಅದಕ್ಕಾಗಿ ವಿಷಾದಿಸುತ್ತೇನೆ. ಜನರು ಅರ್ಥ ಮಾಡಿಕೊಂಡ ರೀತಿಯಲ್ಲಿ ನಾನು ಹೇಳಿಕೆ ನೀಡಿಲ್ಲ’ ಎಂದು ಅಬ್ದುಲ್ಲಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.