ಚೆನ್ನೈ: ನರ ಹಂತಕ ವೀರಪ್ಪನ್ ಕುರಿತ ಕನ್ನಡದ ~ಅಟ್ಟಹಾಸ~ ಹಾಗೂ ತಮಿಳಿನ ~ವಾನ ಯುದ್ಧಂ~ ಚಿತ್ರವನ್ನು ತಮಿಳು ನಿಯತಕಾಲಿಕೆ ~ನಕ್ಕಿರನ್~ ಸಂಪಾದ ಗೋಪಾಲ್ ವೀಕ್ಷಿಸಿ ಸಮ್ಮತಿಸಿದ ಬಳಿಕವಷ್ಟೇ ಬಿಡುಗಡೆ ಮಾಡಬಹುದು ಎಂದು ಚಿತ್ರದ ನಿರ್ಮಾಪಕರಿಗೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಕಾಡುಗಳ್ಳ ವೀರಪ್ಪನ್ ಅಕ್ಟೋಬರ್ 2004ರಲ್ಲಿ ತಮಿಳುನಾಡು ಎಸ್ಟಿಎಫ್ ಗುಂಡಿಗೆ ಹತನಾಗಿದ್ದ. ಈತನ ಕುರಿತು ಬೆಂಗಳೂರು ಮೂಲದ ನಿರ್ಮಾಪಕ ಹಾಗೂ ನಿರ್ದೇಶಕ ಎಎಮ್ಆರ್ ರಮೇಶ್ ಹಾಗೂ ಇಬ್ಬರು ನಿರ್ಮಾಪಕರು ಸಿನಿಮಾ ಮಾಡುತ್ತಿದ್ದಾರೆ.
~ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪರಿಸಿದ ಸಂದರ್ಭದಲ್ಲಿ ನಾನು ಸಂದಾನಕ್ಕಾಗಿ ಐದು ಬಾರಿ ಕಾಡಿಗೆ ಹೋಗಿದ್ದೆ. ರಾಜ್ ಕುಮಾರ್ ಅವರನ್ನು ಸುರಕ್ಷಿತವಾಗಿ ಕರೆತರುವಲ್ಲಿ ನನ್ನ ಪಾತ್ರ ಬಹಳ ಮುಖ್ಯವಾಗಿತ್ತು. ಆದರೆ ಚಿತ್ರ ತೆಗೆಯುವ ಸಂದರ್ಭದಲ್ಲಿ ಚಿತ್ರದಲ್ಲಿನ ನನ್ನ ಪಾತ್ರ ಕುರಿತು ಯಾವುದೇ ರೀತಿಯ ಚರ್ಚೆಯನ್ನು ನಡೆಸಲಿಲ್ಲ ಹಾಗೂ ಸಲಹೆಯನ್ನೂ ಕೇಳಿಲ್ಲ. ಅದೂ ಅಲ್ಲದೆ, ಚಿತ್ರದಲ್ಲಿ ನನ್ನ ವಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ಪಾತ್ರವನ್ನು ತೋರಿಸಲಾಗಿದೆ ಎಂದು~ ಚಿತ್ರ ಬಿಡುಗಡೆಗೆ ತಡೆ ಕೋರಿ ಸಂಪಾದಕ ಗೋಪಾಲ್ ನಗರ ಸಿವಿಲ್ ನ್ಯಾಯಾಲದಲ್ಲಿ ಅರ್ಜಿ ಹಾಕಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಗೋಪಾಲ್ ಅವರ ಅರ್ಜಿಯನ್ನು ಪುರಸ್ಕರಿಸಿ ಚಿತ್ರ ಬಿಡುಗಡೆಗೆ ಏಪ್ರಿಲ್ 17ರವರೆಗೆ ತಾತ್ಕಾಲಿಕ ತಡೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.