ನವದೆಹಲಿ : ‘ಕಾಡುಗಳ್ಳ ವೀರಪ್ಪನ್ ಸತ್ತ ನಂತರ ಆನೆಗಳ ಸಂಖ್ಯೆ ಹೆಚ್ಚಿದೆ. ಆದರೆ ಬೇರೆ–ಬೇರೆ ಕಾರಣಗಳಿಗೆ ಆನೆಗಳು ಸಾಯುತ್ತಲೇ ಇವೆ. ಆನೆ ಕಾರಿಡಾರ್ ರೂಪಿಸಿದರೆ ಅವುಗಳ ಸಾವನ್ನು ತಡೆಯಬಹುದೇ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿತು.
ಆನೆ ಕಾರಿಡಾರ್ಗಳಿಗಾಗಿ ಒತ್ತಾಯಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಮದನ್.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ವಿಚಾರಣೆ ನಡೆಸಿತು.
‘ಹೆದ್ದಾರಿಗಳಲ್ಲಿ ಆನೆಗಳು ಸಾಯುತ್ತಿವೆ, ರೈಲುಗಳಿಗೆ ಸಿಲುಕಿ ಆನೆಗಳು ಬಲಿಯಾಗುತ್ತಿವೆ. ನೋಡಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದರೆ ಏನೂ ಬದಲಾವಣೆ ಆಗದು. ಇವೇ ಜಾಗಗಳಲ್ಲಿ ಓಡಾಡಬೇಕು ಎಂದು ಆನೆಗಳಿಗೆ ಸೂಚಿಸುವುದು ಸಾಧ್ಯವಿಲ್ಲ. ಆನೆಗಳಿಗೆ ಸುರಕ್ಷಿತವಾದ ಕಾರಿಡಾರ್ ಬೇಕು. ಈ ಬಗ್ಗೆ ಯೋಚನೆ ಮಾಡಿ. ಇನ್ನು ಹತ್ತು ದಿನಗಳಲ್ಲಿ ವರದಿ ನೀಡಿ’ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್.ನಾಡಕರ್ಣಿ ಅವರಿಗೆ ಪೀಠ ಸೂಚಿಸಿತು.
‘ಆನೆಗಳಿಗೆ ಮೀಸಲಿರಿಸಿರುವ ಪ್ರದೇಶ ಅವುಗಳಿಗೆ ಸಾಲುತ್ತಿಲ್ಲ. ಆನೆ ಕಾರಿಡಾರ್ಗಳನ್ನು ಹಾದು ಹೋಗುವ ಹೆದ್ದಾರಿ ಮತ್ತು ರೈಲು ಮಾರ್ಗಗಳಲ್ಲಿ ಅಪಘಾತಗಳು ಸಂಭವಿಸಿ ಆನೆಗಳು ಸಾಯುತ್ತಿವೆ. ಹೀಗಾಗಿ ಸುರಕ್ಷಿತವಾದ ಆನೆ ಕಾರಿಡಾರ್ಗಳನ್ನು ರೂಪಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಎದುರು ಪ್ರತಿಪಾದಿಸಿದರು.
ಈ ವಿಚಾರದಲ್ಲಿ ಪೀಠಕ್ಕೆ ನೆರವಾಗಲು ನೇಮಿಸಿರುವ ನ್ಯಾಯಾಲಯ ಸಹಾಯಕರು (ಅಮಿಕಸ್ ಕ್ಯೂರಿ) ಕೂಡ, ‘ಆನೆ ಕಾರಿಡಾರ್ಗಳನ್ನು ರೂಪಿಸಿದರೆ ಆನೆಗಳ ಸಾವನ್ನು ಸ್ವಲ್ಪಮಟ್ಟಿಗೆ ತಡೆಯಬಹುದು’ ಎಂದು ತಿಳಿಸಿದರು.
‘ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಇದೇ ವಿಚಾರಕ್ಕೆ ಸಂಬಂಧಿಸಿದ ಕೆಲವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ದೇಶದಲ್ಲಿ 27 ಆನೆ ಕಾರಿಡಾರ್ಗಳನ್ನು ರೂಪಿಸಬೇಕು ಎಂಬ ಶಿಫಾರಸುಗಳನ್ನು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ಪರಿಗಣಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ಆ ಪೀಠಕ್ಕೆ ಮಾಹಿತಿ ನೀಡಿದ್ದೇವೆ’ ಎಂದು ನಾಡಕರ್ಣಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.