ಹೈದರಾಬಾದ್: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬ ಗಗನ ಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಳಿಕ ಆಕೆಯ ಪಾದ ಮುಟ್ಟಿ ಕ್ಷಮೆ ಕೋರಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಭಾನುವಾರ ಈ ಘಟನೆ ನಡೆದಿದೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಏರ್ಲೈನ್ಸ್ ಸಂಸ್ಥೆಯ ಗಗನ ಸಖಿಯೊಂದಿಗೆ ಭರತ್ ಮತ್ತು ಕಲ್ಯಾಣ್ ಎಂಬ ಯುವಕರು ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಆ ಯುವತಿ ಗಸ್ತಿನಲ್ಲಿದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಮಾನ ನಿಲ್ದಾಣದ ಆವರಣದಲ್ಲಿನ ಪೊಲೀಸ್ ಠಾಣೆಗೆ ಆರೋಪಿತರನ್ನು ಕರೆತಂದಿದ್ದಾರೆ. ಮದ್ಯ ಸೇವಿಸಿದ್ದರಿಂದ ಅಮಲಿನಲ್ಲಿ ಈ ರೀತಿ ನಡೆದುಕೊಂಡಿದ್ದೇವೆ ಎಂದು ಹೇಳಿ ಆ ಗಗನ ಸಖಿಯ ಕ್ಷಮೆ ಕೋರಿದ್ದಾರೆ.
ಕೊನೆಗೆ ಪೊಲೀಸರ ಎದುರೇ ಒಬ್ಬ ಯುವಕ ಗಗನ ಸಖಿಯ ಕಾಲು ಮುಟ್ಟಿ ಕ್ಷಮೆ ಕೋರಿದ್ದಾನೆ. ಈ ಘಟನೆ ಕುರಿತಂತೆ ಗಗನ ಸಖಿ ದೂರು ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.