ADVERTISEMENT

ವೋಟಿಗಾಗಿ ನೋಟು ಹಗರಣ: ಕೋರ್ಟ್‌ಗೆ ಅಮರ್‌ಸಿಂಗ್ ಗೈರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 8:15 IST
Last Updated 6 ಸೆಪ್ಟೆಂಬರ್ 2011, 8:15 IST
ವೋಟಿಗಾಗಿ ನೋಟು ಹಗರಣ: ಕೋರ್ಟ್‌ಗೆ ಅಮರ್‌ಸಿಂಗ್ ಗೈರು
ವೋಟಿಗಾಗಿ ನೋಟು ಹಗರಣ: ಕೋರ್ಟ್‌ಗೆ ಅಮರ್‌ಸಿಂಗ್ ಗೈರು   

ನವದೆಹಲಿ (ಐಎಎನ್‌ಎಸ್): ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್‌ಗೆ ಮಂಗಳವಾರ ಹಾಜರಾಗಬೇಕಿದ್ದ ರಾಜ್ಯಸಭಾ ಸದಸ್ಯ ಹಾಗೂ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಅವರು ಅನಾರೋಗ್ಯದ ಕಾರಣ ನೀಡಿ ಗೈರು ಹಾಜರಾಗಿದ್ದಾರೆ.

2008ರಲ್ಲಿ  ನಡೆದ ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಅಮರಸಿಂಗ್ ಅವರಿಗೆ ಮಂಗಳವಾರ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
 
‘ಅಮರ್ ಸಿಂಗ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅವರಿಗೆ ಹೊರಗಡೆ ತಿರುಗಾಡದಂತೆ ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಅವರು ಇಂದು ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗಿಲ್ಲ’ ಎಂದು ಅಮರ್ ಸಿಂಗ್ ಪರ ವಕೀಲರು ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಹೇಳಿದರು.

‘ಅವರು ಕೋರ್ಟ್ ಹಾಜರಾಗುವುದನ್ನು ತಪ್ಪಿಸುತ್ತಿಲ್ಲ, ನ್ಯಾಯಲಯ ನಿಗದಿ ಪಡಿಸುವ ವಿಚಾರಣೆಯ ಮುಂದಿನ ದಿನಾಂಕದಂದು ಖಂಡಿತ ಹಾಜರಾಗುತ್ತಾರೆ’ ಎಂದು ವಕೀಲರು ತಿಳಿಸಿದರು.
 
ಅಮರ ಸಿಂಗ್ ಪರವಾಗಿ ನ್ಯಾಯಾಲಯಕ್ಕೆ ವಕೀಲರು ಸಲ್ಲಿಸಲಾದ ಅರ್ಜಿಯಲ್ಲಿ ‘ಸಿಂಗ್ ಅವರಿಗೆ ಕೆಲ ವರ್ಷದ ಹಿಂದೆ  ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಅವರು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾಗಿದೆ. ಅಲ್ಲದೇ ಅವರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ನರಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ, ವಿಶೇಷ ನ್ಯಾಯಮೂರ್ತಿ ಸಂಗೀತಾ ದಿಂಗ್ರಾ ಸೆಹಗಲ್ ಅವರು ಅಮರ್ ಸಿಂಗ್ ಅವರಿಗೆ ಮಾಡಲಾಗಿರುವ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಿರ್ದಿಷ್ಟ ದಿನಾಂಕ ಉಲ್ಲೇಖದೊಂದಿಗೆ ಅವರ ಆರೋಗ್ಯ ಕುರಿತ ವೈದ್ಯಕೀಯ ವರದಿ, ಹಾಗೂ ಅವರು ಎಷ್ಟು ಬಾರಿ ವೈದ್ಯರನ್ನು ಭೇಟಿ ಮಾಡಿದ್ದಾರೆ ಎನ್ನುವ ವಿವರವನ್ನು ಕೋರ್ಟ್‌ಗೆ ಸಲ್ಲಿಸುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.