ADVERTISEMENT

ವೋಟಿಗಾಗಿ ನೋಟು ಹಗರಣ: ದೆಹಲಿ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 13:05 IST
Last Updated 3 ಅಕ್ಟೋಬರ್ 2011, 13:05 IST

ನವದೆಹಲಿ (ಐಎಎನ್‌ಎಸ್): ವೋಟಿಗಾಗಿ ನೋಟು ಹಗರಣದಲ್ಲಿ ಬಂಧನಕ್ಕೊಳಗಾಗಿರುವ  ಸಮಾಜವಾದಿ ಪಕ್ಷದ ಮಾಜಿ ಮುಖಂಡ, ಸಂಸದ ಅಮರಸಿಂಗ್ ಅವರು ಸೋಮವಾರ ಸಲ್ಲಿರುವ ಮಧ್ಯಂತರ ಹಾಗೂ ನಿಯಮಿತ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಿತ್ ಭಾರಿಹೋಕ್ ಅವರು ಹಗರಣದ ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ವರದಿಯನ್ನು ಮೂರು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೆಶಿಸಿದರು. ಇದೆ ವೇಳೆ ಅಮರ ಸಿಂಗ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್12 ರಂದು ನಡೆಸುವುದಾಗಿ ತಿಳಿಸಿದರು.

ಅಮರ ಸಿಂಗ್ ಅವರು ವೈದ್ಯಕೀಯ ವರದಿ ಆಧಾರದ ಮೇಲೆ ತಮಗೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಅವರು ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುವ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯು ಸಿಂಗ್ ಅವರ ಮೂತ್ರಪಿಂಡ ಕಾಯಿಲೆಗೆ ನಡೆಸಿರುವ ಚಿಕಿತ್ಸೆಗಳ ಕುರಿತು ವೈದ್ಯಕೀಯ ವರದಿಯನ್ನು ಅಕ್ಟೋಬರ್ 12 ರಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೆಶನ ನೀಡಿದರು.

ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಒಳಗಾಗಿ ಮೂತ್ರನಾಳದ ಸೊಂಕಿನಿಂದ ಬಳಲುತ್ತಿರುವ ಅಮರ ಸಿಂಗ್ ಅವರು `ರೋಗಪೀಡಿತ ಹಾಗೂ ದುರ್ಬಲ ವ್ಯಕ್ತಿ~ಯಾಗಿದ್ದಾರೆ ಆದ್ದರಿಂದ ಅವರಿಗೆ ಮಧ್ಯಂತರ ಜಾಮೀನು ನೀಡಬೇಕೆಂದು ಸಿಂಗ್ ಪರ ವಕೀಲರು ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿಕೊಂಡರು.

ಸಿಂಗ್ ಅವರು ಸೆಪ್ಟೆಂಬರ 6 ರಂದು ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದ ಸಮನ್ಸ್‌ಗೆ ಉತ್ತರಿಸಲು ಸ್ಥಳೀಯ ತೀಸ್ ಹಜಾರಿ ಕೋರ್ಟ್‌ಗೆ ಹಾಜರಾದ ವೇಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
 
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ `ಅಪಕೀರ್ತಿ~ ಎಸಗುವಂತಹ ಈ ಹಗರಣದಲ್ಲಿ ಸಿಂಗ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿ  ದೆಹಲಿ ಕೋರ್ಟ್ ಸಿಂಗ್ ಅವರು ಸಲ್ಲಿಸಿದ ಮಧ್ಯಂತರ ಹಾಗೂ ನಿಯಮಿತ ಜಾಮೀನು ಅರ್ಜಿಗಳನ್ನು ಸೆಪ್ಟೆಂಬರ್ 28 ರಂದು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.