ADVERTISEMENT

ಶಂಕರಾಚಾರ್ಯ ಬೆಟ್ಟದ ಹೆಸರು ಬದಲಿಸಲ್ಲ: ಒಮರ್‌ ಅಬ್ದುಲ್ಲಾ

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ನಗರ (ಪಿಟಿಐ): ಶಿವ ದೇವಾಲಯವಿರುವ ಶಂಕ­ರಾಚಾರ್ಯ ಬೆಟ್ಟದ ಹೆಸರು ಬದ­ಲಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ­ಮಂತ್ರಿ  ಒಮರ್‌ ಅಬ್ದುಲ್ಲಾ ಭಾನು­ವಾರ ಸ್ಪಷ್ಟಪಡಿಸಿದ್ದು ಈ ಕುರಿತು ಎದ್ದಿರುವ ವಿವಾದಕ್ಕೆ ಕೊನೆ ಹಾಡಿದ್ದಾರೆ.

‘ಶ್ರೀನಗರದಲ್ಲಿರುವ ಶಂಕ­ರಾಚಾರ್ಯ ಬೆಟ್ಟದ ಹೆಸರು  ಬದಲಿ­ಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎನ್ನುವುದನ್ನು ನಾನು ಮತ್ತೆ ಮತ್ತೆ ಸ್ಪಷ್ಟಪ­ಡಿಸುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ‘ಯಾವುದೋ ಒಂದು ಗ್ರಹಿಕೆಯ ಮೇಲೆ ನಡೆಯುತ್ತಿರುವ ಈ ವಿವಾದದ ಕುರಿತ ಚರ್ಚೆಯಿಂದ ದೂರವಿರಲು ನಾನು ಬಯಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

‘ಹೆಸರು ಬದಲಾವಣೆ ಮಾಡುವ ಬಗ್ಗೆ ಪ್ರಾಚ್ಯವಸ್ತು ಸರ್ವೇಕ್ಷಣಾ­ಲಯ­ದಿಂದ ಯಾವುದೇ ಪ್ರಸ್ತಾವ ಇಲ್ಲ ಎನ್ನುವು­ದನ್ನೂ ನಾನು ಖಚಿತಪಡಿಸಿ­ಕೊಂಡಿದ್ದೇನೆ. ಆದರೂ ಈ ಕುರಿತು ಗಾಳಿ ಸುದ್ದಿ ಹರಡಿರುವುದರ ಬಗ್ಗೆ ನನಗೇನು ತಿಳಿಯದು’ ಎಂದೂ ಅವರು ಹೇಳಿದ್ದಾರೆ.

‘ವಾಜಪೇಯಿ ಯುಗಾಂತ್ಯ’
ಭೋಪಾಲ್‌ (ಪಿಟಿಐ):
ಬಿಜೆಪಿಯಲ್ಲಿ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ.ಅಡ್ವಾಣಿ ಅವರ ಯುಗ ಅಂತ್ಯ­ಗೊಂಡಿದೆ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡಿರುವ ವಾಜಪೇಯಿ ಸೋದರ ಸಂಬಂಧಿ ಕರುಣಾ ಶುಕ್ಲಾ ಭಾನುವಾರ ಹೇಳಿದ್ದಾರೆ.

‘ಬಿಜೆಪಿಯಲ್ಲಿ ನನ್ನನ್ನು ಸಂಪೂರ್ಣ­ ಕಡೆಗಣಿ­ಸಲಾ­ಗಿತ್ತು’ ಎಂದು ಮಾಜಿ ಸಂಸದೆ ಶುಕ್ಲಾ ಅಸಮಾಧಾನ ಹೊರ­ಹಾಕಿದ್ದಾರೆ. ನರೇಂದ್ರ ಮೋದಿ, ರಾಜನಾಥ್ ಸಿಂಗ್‌ ಸೇರಿದಂತೆ ಇತರ ವ್ಯಕ್ತಿಗಳ ಗುಂಪು ಬಿಜೆಪಿಯನ್ನು ಮುನ್ನಡೆಸುತ್ತಿದೆ ಎಂದು ಅವರು ದೂರಿದ್ದಾರೆ.

‘ಮುಖ್ಯಮಂತ್ರಿ ರಮಣ್‌ ಸಿಂಗ್‌ ನೇತೃತ್ವದ ಪಕ್ಷದ ಛತ್ತೀಸ್‌ಗಡ ಬಿಜೆಪಿ ಘಟಕ­ದಿಂದ ನಾನು ತೀವ್ರ ನೋವು ಅನು­ಭವಿಸಿದ್ದೇನೆ. ಪಕ್ಷ ನನ್ನನ್ನು ಕೆಟ್ಟದಾಗಿ ನಡೆಸಿ­ಕೊಂಡಿತು’ ಎಂದು ಅವರು ಆಪಾದನೆ ಮಾಡಿದ್ದಾರೆ
.
ಉಗ್ರಾಣ ಕುಸಿತ: ಇಬ್ಬರ ಸಾವು
ಮುಂಬೈ (ಐಎಎನ್‌ಎಸ್‌):
ಭಾನುವಾರ ಬೆಳಿಗ್ಗೆ 5 ಗಂಟೆಗೆ ಎರಡು ಅಂತಸ್ತಿನ ಗೋದಾಮು ಕುಸಿದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ಮತ್ತೊಬ್ಬರು ಗಾಯಗೊಂಡಿದ್ದು ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಅಂಧೇರಿಯ ಸಾಕಿ ನಾಕ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೂವರು ಮಲಗಿರುವ ಸಂದರ್ಭ­ದಲ್ಲಿ ಕಟ್ಟಡ ಕುಸಿದಿದ್ದು, ಮೃತರನ್ನು ಇಸ್ಮಾಯಿಲ್‌ ಅನ್ವರ್‌ (20), ಮತ್ತು ಅಮಿತ್‌ (25) ಎಂದು ಗುರುತಿಸಲಾಗಿದೆ.

ಶೂಟೌಟ್‌ ಆರೋಪಿಗಳ ಬಂಧನ
ಗುಡಗಾಂವ್‌ (ಐಎಎನ್‌ಎಸ್‌): 
ರೆವರಿ ಮತ್ತು ಮಹೇಂದ್ರಗಡ ನ್ಯಾಯಾ­­ಲಯದ ಆವರಣದಲ್ಲಿ ನಡೆದ  ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ   ಬೇಕಾಗಿದ್ದ  ಪಾತಕಿ ಮತ್ತು ಆತನ ಇಬ್ಬರು ಸಹಚರರನ್ನು ಭಾನು­ವಾರ ಬಂಧಿಸ­ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಲದೀಪ್‌ ಅಲಿಯಾಸ್‌ ಡಾಕ್ಟರ್‌ ಮತ್ತು ಈತನ ಸಹಚರರಾಗಿರುವ ಕಮಲ್‌ ಮತ್ತು ಚರಣ್‌ ಸಿಂಗ್‌ ಅವ­ರನ್ನು ಬಂಧಿ­ಸ­­ಲಾಗಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ ವಿವೇಕ ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.