ಭೋಪಾಲ್: ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಲ್ಲಿನ ದಸರಾ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ವನ್ನು ಶನಿವಾರ ಆರಂಭಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಆರಂಭಗೊಂಡ ರೈತರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ರೈತರನ್ನು ಸಮಾಧಾನಪಡಿಸಲು ಚೌಹಾಣ್ ಅವರು ಸತ್ಯಾಗ್ರಹದ ಮೊರೆ ಹೋಗಿದ್ದಾರೆ. ಉಪವಾಸ ಆರಂಭಕ್ಕೆ ಮುನ್ನ ಮಾತನಾಡಿದ ಚೌಹಾಣ್, ರೈತರ ಉತ್ಪನ್ನಕ್ಕೆ ಲಾಭದಾಯಕ ಬೆಲೆ ದೊರಕಿಸುವ ಭರವಸೆ ನೀಡಿದರು.
‘ರಾಜ್ಯದಲ್ಲಿ ಭಾರಿ ಪ್ರಮಾಣದ ಬೆಳೆಯಿಂದಾಗಿ ಉತ್ಪನ್ನಗಳ ಬೆಲೆ ಪಾತಾಳಕ್ಕೆ ಕುಸಿದಿದೆ. ರೈತರ ಸಮಸ್ಯೆಗಳು ನನಗೆ ತಿಳಿದಿದೆ’ ಎಂದು ಅವರು ಹೇಳಿದರು.
ಪ್ರತಿಭಟನೆ ನಡೆಸುತ್ತಿರುವ ರೈತರು ದಸರಾ ಮೈದಾನಕ್ಕೆ ಬಂದು ತಮ್ಮೊಂದಿಗೆ ಮಾತುಕತೆ ನಡೆಸುವಂತೆ ಚೌಹಾಣ್ ಆಹ್ವಾನ ನೀಡಿದರು. ಆಡಳಿತದ ಎಲ್ಲ ಕೆಲಸಗಳನ್ನೂ ಅಲ್ಲಿಂದಲೇ ಮಾಡುವುದಾಗಿ ಹೇಳಿದರು. ಚೌಹಾಣ್ ಅವರ ಉಪವಾಸ ಕೇವಲ ನಾಟಕ ಎಂದು ವಿರೋಧ ಪಕ್ಷ ಕಾಂಗ್ರೆಸ್ ಬಣ್ಣಿಸಿದೆ.
* ರೈತರಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ನಿಲುವು ದೃಢವಾಗಿದೆ. ಕೃಷಿ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ರೈತರಿಗೆ ಲಾಭದಾಯಕ ಬೆಲೆ ನೀಡಲಿದೆ.
-ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.