ನವದೆಹಲಿ: ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದೇ ಪರಿಗಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನವು ಶೇಕಡ 9ರ ಆರ್ಥಿಕ ಬೆಳವಣಿಗೆ ದರ ಸಾಧಿಸಲು ನೆರವಾಗಲಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಮಿತಾಭ್ ಕಾಂತ್ ಹೇಳಿದ್ದಾರೆ.
ಜಿಎಸ್ಟಿಯು ದೇಶದ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲಿದೆ. ತೆರಿಗೆ ವಂಚನೆ ತಡೆಯಲು ನೆರವಾಗಲಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ಕ್ರಾಂತಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಜಿಡಿಪಿಯಲ್ಲಿ ಶೇಕಡ 1ರಿಂದ 2ರಷ್ಟು ಹೆಚ್ಚಳವಾಗಲು ಜಿಎಸ್ಟಿ ನೆರವಾಗಬಹುದು. ಜಿಎಸ್ಟಿಯಿಂದಾಗಿ ಹಣದುಬ್ಬರದಲ್ಲಿ ಶೇಕಡ 2ರಷ್ಟು ಇಳಿಕೆಯಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೇಗದಲ್ಲಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ದೇಶ ಎಂಬ ಬಿರುದು ಚೀನಾ ಪಾಲಾಗುತ್ತಿರುವ ಬೆನ್ನಲ್ಲೇ ಕಾಂತ್ ಅವರು ಈ ಹೇಳಿಕೆ ನೀಡಿದ್ದಾರೆ. ಜನವರಿ–ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇಕಡ 6.1ಕ್ಕೆ ಕುಸಿದಿದ್ದರೆ, ಚೀನಾದ ಜಿಡಿಪಿ ದಾಖಲೆಯ ಶೇಕಡ 6.9ಕ್ಕೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.