ತಿರುವನಂತಪುರ (ಪಿಟಿಐ): ಶೌಚಾಲಯ ಪ್ರತಿ ಮಹಿಳೆಯ ಸಂವಿಧಾನಿಕ ಹಕ್ಕಾಗಬೇಕು ಎಂದು ಪ್ರತಿಪಾದಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್, ಬಹಿರ್ದೆಸೆಗೆ ಹೋಗುವುದು ಜನ್ಮಸಿದ್ಧ ಹಕ್ಕು ಎಂದು ಭಾವಿಸಿರುವ ಭಾರತೀಯರ ಮನೋಭಾ ವವನ್ನು ಕಟುವಾಗಿ ಖಂಡಿಸಿದ್ದಾರೆ.
ಮಹಿಳೆಯ ಖಾಸಗಿತನ ಹಾಗೂ ಘನತೆಯ ದೃಷ್ಟಿಯಿಂದ ಶೌಚಾಲಯ ಆಕೆಯ ಮೂಲಭೂತ ಹಕ್ಕಾಗಬೇಕು. ಪ್ರತಿ ಶಾಲೆ, ಅಂಗನವಾಡಿ ಹಾಗೂ ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ಇರಲೇಬೇಕು ಎಂದು ರಮೇಶ್ ಹೇಳಿದ್ದಾರೆ.
`ಶೌಚಾಲಯ ನಿರ್ಮಿಸದ ಹೊರತೂ ಇಂದಿರಾ ಆವಾಸ್ ಯೋಜನೆ ಅಡಿ ನಾವು ಹಣ ನೀಡುವುದಿಲ್ಲ. ಶೌಚಾಲಯ ನಿರ್ಮಾಣವನ್ನು ನಾವು ಕಡ್ಡಾಯಗೊಳಿಸುತ್ತಿದ್ದೇವೆ. ಅದು ಮೂಲಭೂತ ಹಕ್ಕಾಗಬೇಕು~ ಎಂದು ರಮೇಶ್ ತಿಳಿಸಿದರು.
ಶೌಚಾಲಯ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆಯಲ್ಲಿ ಕೇರಳ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿದ ನಂತರ ಅವರು ವರದಿಗಾರರ ಜತೆ ಮಾತನಾಡಿದರು.
ಬಹಿರಂಗವಾಗಿ ಮಲ ವಿಸರ್ಜನೆ ಮಾಡುವುದು ಭಾರತೀಯರ ಮನೋ ಧರ್ಮವಾಗಿದೆ. ಅವು ಪ್ರಗತಿಪರ ರಾಜ್ಯಗಳೋ ಅಥವಾ ಬಿಮಾರು (ಬಿಹಾರ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ) ರಾಜ್ಯಗಳೋ ಎಂಬ ವ್ಯತ್ಯಾಸವಿಲ್ಲದೇ ಎಲ್ಲರೂ ಈ ಮನೋಭಾವ ಹೊಂದಿದ್ದಾರೆ. ಅದು ಕರ್ನಾಟಕದಲ್ಲೂ ಇದೆ, ತಮಿಳುನಾಡಿನಲ್ಲೂ ಇದೆ ಎಂದು ಸಚಿವರು ಖಂಡಿಸಿದರು.
ಬಹಿರಂಗವಾಗಿ ಮಲ ವಿಸರ್ಜನೆ ಮಾಡುವವರ ಪೈಕಿ ಶೇ 60ರಷ್ಟು ಜನ ಭಾರತದಲ್ಲೇ ಕಾಣುತ್ತಾರೆ. ಈ ನಿಟ್ಟಿನಲ್ಲಿ ಸುಧಾರಣೆ ತರಲು ರಾಜಕೀಯ ಪಕ್ಷಗಳು ಶೌಚಾಲಯ, ಒಳಚರಂಡಿ ಸಮಸ್ಯೆಗಳನ್ನು ತಮ್ಮ ಕಾರ್ಯ ಸೂಚಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.