ADVERTISEMENT

ಶ್ರೀನಗರ : ಕನಿಷ್ಠ ಉಷ್ಣಾಂಶ -4.3 ಡಿ.ಸೆ.

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 11:16 IST
Last Updated 16 ಡಿಸೆಂಬರ್ 2013, 11:16 IST

ಶ್ರೀನಗರ(ಪಿಟಿಐ): ಕಾಶ್ಮೀರ ಕಣಿವೆಯಲ್ಲಿ ಚಳಿಯ ಅಲೆ ಮುಂದುವರಿದಿದ್ದು, ಶ್ರಿನಗರದಲ್ಲಿ ಭಾನುವಾರ ರಾತ್ರಿ ಪ್ರಸಕ್ತ ಚಳಿಗಾಲದ ಕನಿಷ್ಠ ಉಷ್ಣಾಂಶ -4.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪಂಜಾಬ್ ಹರಿಯಾಣದಲ್ಲಿ ಸೋಮವಾರ ದಟ್ಟ ಮಂಜು ಮುಸುಕಿದ್ದು, ದಾರಿ ಕಾಣದೆ ವಾಹನಗಳ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ ಕನಿಷ್ಠ ಉಷ್ಣಾಂಶ -3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರ ಉಷ್ಣಾಂಶ ಮತ್ತಷ್ಟು ಕುಸಿಯುವ ಮೂಲಕ ಜನರಲ್ಲಿ ಮೈ ನಡುಕ ಹೆಚ್ಚಿಸಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲೇಹ್ ಪ್ರದೇಶದಲ್ಲಿ ಅತ್ಯಂತ ಕನಿಷ್ಠ ಉಷ್ಟಾಂಶ -13.8 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಹಿಂದಿನ ದಿನ ಇದ್ದ ಪರಿಸ್ಥಿತಿ ಮುಂದುವರಿದಿದೆ. ದಾಲ್ ಸರೋವರ ಸೇರಿದಂತೆ ಸಣ್ಣಪುಟ್ಟ ನೀರಿನ ತೊರೆಗಳು ಹಿಮಗಡ್ಡೆಗಳಾಗಿವೆ. ಕುಡಿಯುವ ನೀರಿನ ನಳಗಳಲ್ಲಿನ ನೀರು ಸಹ ಮಂಜುಗಡ್ಡೆಯಾಗಿ ಪರಿವರ್ತನೆಯಾಗಿದೆ.

ADVERTISEMENT

ಕಾರ್ಗಿಲ್‌ನಲ್ಲಿ ಭಾನುವಾರ ಉಷ್ಣಾಂಶ ಕನಿಷ್ಠ -10.0 ಡಿ.ಸೆ. ದಾಖಲಾಗಿದ್ದು, ಶನಿವಾರ -10.3 ಡಿ.ಸೆ. ದಾಖಲಾಗಿತ್ತು.

ದಟ್ಟ ಮಂಜು: ಪಂಜಾಬ್ ಮತ್ತು ಹರಿಯಾಣದಲ್ಲಿ ಸೋಮವಾರ ದಟ್ಟ ಮಂಜು ಮುಸುಕಿದ್ದು, ಸರಿಯಾಗಿ ದಾರಿ ಕಾಣದ ಪರಿಸ್ಥಿತಿ ಇದ್ದುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಎರಡು ರಾಜ್ಯಗಳ ಗಡಿ ಬಳಿ ವಾಹನಗಳ ಮಧ್ಯೆ ಡಿಕ್ಕಿ ಸಂಭಿವಿಸಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








 

ಮೈ ಕೊರೆಯುವ ಚಳಿಯಿಂದ ರಕ್ಷಣೆ ಪಡೆಯುವ ಉದ್ದೇಶಕ್ಕೆ ಬೆಂಕಿ ಕಾಯಿಸಿಕೊಳ್ಳಲು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ವೃದ್ಧನೊಬ್ಬ ಉರುವಲು ಕಟ್ಟಿಗೆಯನ್ನು ಹೊತ್ತೊಯ್ದ ದೃಶ್ಯ. ಚಿತ್ರ: ಎಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.