ನವದೆಹಲಿ (ಪಿಟಿಐ): ಆದಾಯ ತೆರಿಗೆ ಪಾವತಿದಾರರ ೨೦೧೧–೧೨ನೇ ಸಾಲಿನ ವೈಯಕ್ತಿಕ ವಿಭಾಗದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಆರೋಪಿಗಳು ಕೂಡ ಉನ್ನತ ಹತ್ತು ಗಳಿಕೆದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಆರ್ಟಿಐ ಮಾಹಿತಿಯಿಂದ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಆರ್ಟಿಐ ಕಾರ್ಯಕರ್ತ ಸುಭಾಷ್ ಅಗರವಾಲ್ ಸಲ್ಲಿಸಿದ ಅರ್ಜಿಗೆ ನೀಡಿದ ಉತ್ತರದಲ್ಲಿ ಆದಾಯ ತೆರಿಗೆ ಇಲಾಖೆ ಈ ಬಗೆಗಿನ ಅಂಕಿ–ಅಂಶವನ್ನು ನೀಡಿದೆ.
ಪಟ್ಟಿಯಲ್ಲಿ ಶಿರೀನ್ ಮೊದಲ ಸ್ಥಾನದಲ್ಲಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಕಮಲ್ ಸ್ಪಾಂಜ್ ಸ್ಟೀಲ್ ಮತ್ತು ಪವರ್ ಕಂಪೆನಿ ನಿರ್ದೇಶಕರಾದ ಕಮಲ್ಜೀತ್ ಸಿಂಗ್ ಅಹ್ಲುವಾಲಿಯಾ ಮತ್ತು ಪ್ರಶಾಂತ್ ಕುಮಾರ್ ಅಹ್ಲುವಾಲಿಯಾ ತಲಾ ಎರಡನೇ ಮತ್ತು ಒಂಬತ್ತನೇ ಸ್ಥಾನದಲ್ಲಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ವೈಎಸ್ಆರ್ ಕಾಂಗ್ರೆಸ್ ನಾಯಕ, ಸಂಸದ ವೈ.ಎಸ್. ಜಗನ್ಮೋಹನ್ ರೆಡ್ಡಿ ಮೂರನೇ ಸ್ಥಾನದಲ್ಲಿದ್ದಾರೆ.
ಪಟ್ಟಿಯ ಟ್ರಸ್ಟ್ ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹತ್ತರೊಳಗಿನ ಸ್ಥಾನವನ್ನು ಹಾಗೂ ಕಂಪೆನಿ ವಿಭಾಗದಲ್ಲಿ ಮೊದಲೆರಡು ಸ್ಥಾನವನ್ನು ಸರ್ಕಾರಿ ಸ್ವಾಮ್ಯದ ಒಎನ್ಜಿಸಿ ಮತ್ತು ಬ್ಯಾಂಕಿಂಗ್ ವಲಯದ ಎಸ್ಬಿಐ ಪಡೆದಿವೆ. ವೈಯಕ್ತಿಕ ವಿಭಾಗದ ಪಟ್ಟಿಯಲ್ಲಿ ರಾಮಮೂರ್ತಿ ಪ್ರವೀಣ್ಚಂದ್ರ, ಅಸೀಂ ಘೋಷ್, ಇಂದ್ರಾಣಿ ಪಟ್ನಾಯಕ್, ಸಂಧಿಯಗು ಮಾರ್ಟಿನ್, ಮನ್ಸೂರ್ ನಿಜಾಮ್ ಪಟೇಲ್, ಬವಿಹಳ್ಳಿ ರುದ್ರಗೌಡ ಸ್ಥಾನ ಪಡೆದಿದ್ದಾರೆ.
‘ಸರ್ಕಾರದ ಅಧೀನ ಸಂಸ್ಥೆ’ಗಳ ವಿಭಾಗದಲ್ಲಿ ತೈಲೋದ್ಯಮ ಅಭಿವೃದ್ಧಿ ಮಂಡಳಿ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಉತ್ತರಪ್ರದೇಶ ಅವಾಸ್ ಈವಮ್ ವಿಕಾಸ್ ಪರಿಷತ್, ಡಿಎಸ್ಪಿ ಬ್ಯಾಕ್,ರಾಕ್ ಮ್ಯೂಚುವಲ್ ಫಂಡ್, ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್, ಕೋಲ್ಕತ್ತ ಪೋರ್ಟ್ ಟ್ರಸ್ಟ್, ಆಂಧ್ರಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್, ಬರೋಡಾ– ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್, ಪ್ರಥಮಾ ಬ್ಯಾಂಕ್, ಟೋಯೊಟಾ ಮೋಟಾರ್ ಕಾರ್ಪೊರೇಷನ್ ಹಾಗೂ ಛತ್ತೀಸಗಡ ಗ್ರಾಮೀಣ ಬ್ಯಾಂಕ್ ಸ್ಥಾನ ಪಡೆದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.