ADVERTISEMENT

ಶ್ರೀಲಂಕಾ ತಮಿಳರ ಪುನರ್ವಸತಿಗೆ ಆದ್ಯತೆ: ಕರುಣಾಗೆ ಪ್ರಧಾನಿ ಪತ್ರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಚೆನ್ನೈ (ಪಿಟಿಐ): ಶ್ರೀಲಂಕಾ ತಮಿಳು ನಿರಾಶ್ರಿತರ ಪುನರ್ವಸತಿಗೆ ಭಾರತ `ಗರಿಷ್ಠ ಮತ್ತು ಹೆಚ್ಚಿನ ಆದ್ಯತೆ~ ನೀಡಲಿದೆ ಹಾಗೂ `ಭವಿಷ್ಯ~ದಲ್ಲಿ ಇದನ್ನು ಕಾರ್ಯಗತಗೊಳಿಸಲು ಲಂಕಾ ಸರ್ಕಾರವನ್ನು ತೊಡಗುವಂತೆ ಮಾಡುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.

ಶ್ರೀಲಂಕಾ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರಿಗೆ ಆಗಸ್ಟ್ 20ರಂದು ಪತ್ರ ಬರೆದಿರುವ ಪ್ರಧಾನಿ, ಅಲ್ಲಿನ ಸಂಘರ್ಷ ಮುಗಿದಿರುವುದರಿಂದ ತಮಿಳು ನಾಗರಿಕರ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ಭಾರತ ಗಮನ ಹರಿಸಲಿದೆ ಎಂದು ತಿಳಿಸಿದ್ದಾರೆ.
 
`ತಮಿಳರ ಪುನರ್ವಸತಿ ನಮ್ಮ ಸರ್ಕಾರಕ್ಕೆ ಗರಿಷ್ಠ ಹಾಗೂ ಅತ್ಯಂತ ಮಹತ್ವದ ಆದ್ಯತೆಯಾಗಿದೆ~ ಎಂದು ಹೇಳಿರುವ ಸಿಂಗ್ ಅವರ ಪತ್ರವನ್ನು ಮಾಧ್ಯಮಗಳಿಗೆ ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಲಂಕಾದಲ್ಲಿ ತಮಿಳರಿಗೆ ವಸತಿ
ಯೋಜನೆ- ಭಾರತ ಚಾಲನೆ

ಮನ್ನಾರ್ ವರದಿ: ಜನಾಂಗೀಯ ಘರ್ಷಣೆಯಿಂದ ನೊಂದಿರುವ 43,000 ತಮಿಳು ನಿರಾಶ್ರಿತರಿಗಾಗಿ ಭಾರತ ಸರ್ಕಾರವು ಗಾಂಧಿ ಜಯಂತಿದಿನವಾದ ಮಂಗಳವಾರ ಶ್ರೀಲಂಕಾದಲ್ಲಿ ರೂ 1300 ಕೋಟಿ ಮೊತ್ತದ ವಸತಿ ಯೋಜನೆಗೆ ಚಾಲನೆ ನೀಡಿದೆ. 

ಮನ್ನಾರ್, ಮುಲೈತಿವು ಮತ್ತು ಜಾಫ್ನಾ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. 2010ರಲ್ಲಿ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಭಾರತಕ್ಕೆ ಭೇಟಿ ನೀಡಿದ್ದಾಗ ಪ್ರಧಾನಿ ಮನಮೋಹನ್ ಸಿಂಗ್ ತಮಿಳು ನಿರಾಶ್ರಿತರಿಗಾಗಿ ಭಾರತ 50,000 ಮನೆಗಳನ್ನು ನಿರ್ಮಿಸುವ ಭರವಸೆ ನೀಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.