ರಾಮೇಶ್ವರ (ಪಿಟಿಐ): ಭಾರತದ ಮಿನುಗಾರರ ಬಲೆಗಳನ್ನು ದೋಚಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡು ಪೊಲೀಸರು ಶ್ರೀಲಂಕಾ ಮೀನುಗಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಪಾಕ್ ಜಲಸಂಧಿಯ ನೆಡುಂತೀವು ಪ್ರದೇಶದಲ್ಲಿ ಮಿನು ಹಿಡಿಯಲು ತೆರಳಿದ ಸಂದರ್ಭದಲ್ಲಿ ಸುಮಾರು ₨2.80 ಲಕ್ಷ ಮೌಲ್ಯದ ಬಲೆಗಳನ್ನು ಲಂಕಾ ಮೀನುಗಾರರು ದೋಚಿದ್ದಾರೆ ಎಂದು ಜಾನ್ ಬ್ರಿಟ್ಟೊ ನೀಡಿದ ದೂರಿನ ಆಧಾರದಲ್ಲಿ ಪೆಂಬನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೌಕಾ ಸಿಬ್ಬಂದಿ ಮೇಲೂ ಮೊಕದ್ದಮೆ: ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿದೆ. ಭಾರತದ ಮಿನುಗಾರರ ದೋಣಿಗೆ ಶ್ರೀಲಂಕಾ ನೌಕಾ ಸಿಬ್ಬಂದಿ ತಮ್ಮ ಹಡಗನ್ನು ಡಿಕ್ಕಿ ಮಾಡಿಸಿ ಜಖಂಗೊಳಿಸಿದ್ದಾರೆ ಎಂದು ಸಹಾಯರಾಜ್ ದೂರು ನೀಡಿದ್ದಾರೆ. ರಾಮೇಶ್ವರ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಗಾಳಿಯಲ್ಲಿ ಗುಂಡು ಹಾರಿಸಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದೂ ಅವರು ದೂರಿನಲ್ಲಿ ದಾಖಲಿಸಿದ್ದಾರೆ.
ಭಾರತದ ಗಡಿಯೊಳಗೆ ಶ್ರೀಲಂಕಾ ನೌಕಾ ಸಿಬ್ಬಂದಿ ಪ್ರವೇಶಿಸಿದರೆ ತಕ್ಷಣ ಬಂಧಿಸಬೇಕು ಹಾಗೂ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.