ADVERTISEMENT

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ತೇಜ್‌ಪಾಲ್‌ ಪ್ರಕರಣ: ಸಾಕ್ಷಿಗಳ ಹೇಳಿಕೆ ದಾಖಲು
ಪಣಜಿ (ಪಿಟಿಐ):
ತೆಹೆಲ್ಕಾ ಪ್ರಧಾನ ಸಂಪಾ­­ದಕ ತರುಣ್‌ ತೇಜ್‌ಪಾಲ್‌ ವಿರುದ್ಧ ಅತ್ಯಾಚಾರ ಆರೋಪ ಮಾಡಿ­ರುವ ಪತ್ರಕರ್ತೆಯ ಮೂವರು ಸಹೋ­ದ್ಯೋಗಿಗಳು ಶುಕ್ರವಾರ ಇಲ್ಲಿನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿದರು. ಈ ಸಾಕ್ಷಿಗಳು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜ­ರಾಗಿ ಪ್ರತ್ಯೇಕ­ವಾಗಿ ಮ್ಯಾಜಿಸ್ಟ್ರೇಟ್‌ರವರ ಮುಂದೆ ಸಾಕ್ಷ್ಯ ನುಡಿ­ದರು. ಇಡೀ ದಿನ ಮೂವರ ಹೇಳಿಕೆ­ಗಳನ್ನು ದಾಖಲಿಸಿ­ಕೊಳ್ಳ­ಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ­ಯೊಬ್ಬರು ತಿಳಿಸಿದರು.

ನಿರೀಕ್ಷಣಾ ಜಾಮೀನು ಇಲ್ಲ: ಸುಪ್ರೀಂ
ನವದೆಹಲಿ (ಪಿಟಿಐ):
ತಲೆಮರೆಸಿ­ಕೊಂಡ ಅಥವಾ ತನಿಖೆಗೆ ಸಹಕ­ರಿಸದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾ­ರದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ವ್ಯಕ್ತಿಯೊಬ್ಬನ್ನನ್ನು ವಿನಾಕಾರಣ ಪ್ರಕರ­ಣದಲ್ಲಿ ಸಿಲುಕಿಸ­ಲಾಗುತ್ತಿದೆ ಎನ್ನು­ವುದು ಖಚಿತಗೊಂಡ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡ­ಬ­ಹುದು ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ­ನ್ನೊಳಗೊಂಡ ಪೀಠ ಹೇಳಿದೆ.

ಮೂವರು ಕಾರ್ಮಿಕರ ಸಾವು
ಮುಂಬೈ:
ಇಲ್ಲಿಗೆ ಸಮೀಪದ ಡೊಂಬಿ­ವಿಲಿಯಲ್ಲಿರುವ ರಾಸಾ­ಯನಿಕ ಕಾರ್ಖಾನೆ­­ಯಲ್ಲಿ ಶುಕ್ರವಾರ ಸಂಭವಿ­­ಸಿದ  ಸ್ಫೋಟ­ದಲ್ಲಿ ಮೂವರು ಮೃತಪಟ್ಟು ಕನಿಷ್ಠ ಏಳು ಕಾರ್ಮಿಕರು ಗಾಯ­ಗೊಂಡಿ­ದ್ದಾರೆ. ಸಲಕರಣೆಗಳ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂದು  ತನಿಖೆಯಿಂದ ತಿಳಿದು ಬಂದಿದೆ.

ಸಂಜಯ್‌ ದತ್‌ಗೆ ಒಂದು ತಿಂಗಳು ಪೆರೋಲ್‌  
ಮುಂಬೈ:
1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಪುಣೆಯ ಯೆರವಡಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್‌ ನಟ ಸಂಜಯ್‌ ದತ್‌  ಅವರಿಗೆ ಪೆರೋಲ್‌ ಮೇಲೆ ತೆರಳಲು  ಅನುಮತಿ ನೀಡಲಾಗಿದೆ.  ಪತ್ನಿ ಮಾನ್ಯತಾ ದತ್‌  ಅನಾರೋಗ್ಯದ ಕಾರಣ ಪೆರೋಲ್‌ ಮೇಲೆ ತೆರಳಲು ಅನುಮತಿ ನೀಡುವಂತೆ ಕೋರಿ ದತ್‌ ಅರ್ಜಿ ಸಲ್ಲಿಸಿದ್ದರು.

ಬಾಬರಿ ಮಸೀದಿ: ವಿಳಂಬವಾದ ತೀರ್ಪು
ಲಖನೌ:
ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸವಾಗಿ ಎರಡು ದಶಕ­ಗಳು ಕಳೆದರೂ, ಪ್ರಕರಣದ ತೀರ್ಪಿಗೆ ಇನ್ನೂ ಕಾಯಬೇಕಾಗಿದೆ.  ರಾಮ ಜನ್ಮಭೂಮಿ – ಬಾಬರಿ ಮಸೀದಿ ನಿವೇಶನದ ಹಕ್ಕು ಕೋರಿ ದಾವೆ ಹೂಡಿರುವ ಪ್ರಮುಖ  ಧಾರ್ಮಿಕ ನಾಯಕರಾದ ನಿರ್ಮೋಹಿ ಅಖಾರದ ಸಂತ ಮಹಾಂತ ಭಾಸ್ಕರ್‌ ದಾಸ್‌ ಮತ್ತು ಮುಸಲ್ಮಾನ ಪ್ರತಿನಿಧಿ ಮೊಹಮ್ಮದ್‌ ಹಶೀಂ ಅನ್ಸಾರಿ ಅವರ ನೋವು ಮತ್ತು ದುಗುಡಕ್ಕೂ ಇದು ಕಾರಣವಾಗಿದೆ.

‘ಸದ್ಯಕ್ಕೆ ತೀರ್ಪು ಹೊರಬೀಳುವ ನಿರೀಕ್ಷೆ ಇಲ್ಲ’ ಎಂದು ದಾಸ್‌ ನುಡಿದರೆ, ‘ರಾಜ­ಕಾರಣಿಗಳಿಗೆ ನಿರ್ಣಯ ಬೇಕಿಲ್ಲ’ ಎಂದು ಅನ್ಸಾರಿ ಹೇಳಿದ್ದಾರೆ. ಇಬ್ಬರೂ ತೀರ್ಪು ವಿಳಂಬಕ್ಕೆ ಅತೃಪ್ತಿ ವ್ಯಕ್ತಪಡಿಸಿ­ದರೂ, ಕೊನೆಯವರೆಗೂ ತಮ್ಮ ಹೋರಾಟ­ಮುಂದುವರಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.