ADVERTISEMENT

ಸಂಕ್ಷಿಪ್ತ ಸುದ್ದಿ ರಾಷ್ಟೀಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಭೂಕುಸಿತ: ತಡವಾಗಿ ತಲುಪಿದ ರೈಲು
ಉದಕಮಂಡಲ (ತಮಿಳುನಾಡು),(ಪಿಟಿಐ):
ನೀಲಗಿರಿ ಬೆಟ್ಟಗಳ ಸಾಲಿನಲ್ಲಿ ಉಂಟಾದ ಭೂಕುಸಿತದಿಂದಾಗಿ ರೈಲು ಮೂರು ಗಂಟೆ ತಡವಾಗಿ ನಿಲ್ದಾಣವನ್ನು ತಲುಪಿದ ಘಟನೆ ಭಾನುವಾರ ನಡೆದಿದೆ.

ರೈಲುಹಳಿಗಳ ಮೇಲೆ ಬಂಡೆ ಹಾಗೂ ಮಣ್ಣು ಕುಸಿದಿದ್ದರಿಂದ ರೈಲು ಚಲಿಸಲು ಸಾಧ್ಯವಾಗಲಿಲ್ಲ. ಬೆಳಿಗ್ಗೆ 7.15ಕ್ಕೆ ಮೆಟ್ಟುಪಾಳ್ಯದಿಂದ ರೈಲು ಹೊರಟಿತ್ತು. ಕೂನೂರ್‌ನಿಂದ ರೈಲು ನಿಂತ ಸ್ಥಳಕ್ಕೆ ಕೆಲಸಗಾರರು ಬಂದು ಮಣ್ಣನ್ನು ತೆರವುಗೊಳಿಸಿದ ಬಳಿಕ ರೈಲು ಹೊರಟಿತು.

ವಿದ್ಯುತ್ ಸ್ಥಾವರದ ಸುರಕ್ಷತೆ ಪರಿಶೀಲನೆ
ನವದೆಹಲಿ (ಪಿಟಿಐ):
ದೇಶದ ಪರಮಾಣು ಇಂಧನ ನಿಯಂತ್ರಕ ಮಂಡಳಿ (ಎಇಆರ್‌ಬಿ)ಯು ಸುಪ್ರೀಂಕೋರ್ಟ್ ನಿರ್ದೇಶನದನ್ವಯ ಕೂಡುಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಮೊದಲ ಘಟಕದಲ್ಲಿನ ಸುರಕ್ಷತೆ ಮತ್ತು ಭದ್ರತೆಯ ಅಂಶಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದೆ.

“ನಾವು ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೂಡುಂಕುಳಂ ವಿದ್ಯುತ್ ಸ್ಥಾವರದ 1ನೇ ಘಟಕದ ಸುರಕ್ಷತಾ-ಭದ್ರತಾ ಅಂಶಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದೇವೆ” ಎಂದು ಮಂಡಳಿಯ ಅಧಿಕಾರಿಯೊಬ್ಬರು ಶನಿವಾರ ಇಲ್ಲಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಮೇ 6ರಂದು ನೀಡಿದ ಆದೇಶದಲ್ಲಿ, ಇಂಡೊ-ರಷ್ಯಾ ಜಂಟಿ ಸಹಭಾಗಿತ್ವದ ಯೋಜನೆಯಾದ ಕೂಡುಂಕುಳಂನ ಪ್ರಥಮ 1,000 ಮೆ.ವಾ. ಸಾಮರ್ಥ್ಯದ ಪರಮಾಣು ವಿದ್ಯುತ್ ಸ್ಥಾವರದ ಉದ್ಘಾಟನೆಗೆ ಎದುರಾಗಿದ್ದ ಎಲ್ಲ ತೊಡಕುಗಳನ್ನು ನಿವಾರಿಸಿ, `ಸುರಕ್ಷತೆ ಮತ್ತು ಭದ್ರತಾ ಅವಶ್ಯಕತೆ'ಗಳನ್ನು ಪೂರೈಸುವಂತೆ ತಿಳಿಸಿತ್ತು.

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಗುಡಗಾಂವ್(ಪಿಟಿಐ):
ಐದು ವರ್ಷದ ಬಾಲಕಿಯೊಬ್ಬಳನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಇಲ್ಲಿನ ಮೆಟ್ರೊ ನಿಲ್ದಾಣದ ಬಳಿ ಎಸೆದು ಹೋಗಿರುವ ಘಟನೆ ಶನಿವಾರ ನಡೆದಿದೆ.

ಬಾಲಕಿ ಮತ್ತು ಆಕೆಯ ಸಹೋದರ ಸಿಕಂದರ್‌ಪುರಕ್ಕೆ ತೆರಳಿದ್ದಾಗ ಅಪರಿಚಿತ ವ್ಯಕ್ತಿಗಳು ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಪೂರ್ವವಲಯದ ಡಿಸಿಪಿ ಮಹೇಶ್ವರ್ ದಯಾಳ್ ತಿಳಿಸಿದ್ದಾರೆ.

ಬಾಲಕಿ ಅಪಹರಣಗೊಂಡ ನಂತರ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಬಾಲಕಿಯು ರಾತ್ರಿ ದ್ರೋಣಾಚಾರ್ಯ ಮೆಟ್ರೊ ನಿಲ್ದಾಣ ಬಳಿ ಅರೆಪ್ರಜ್ಞಾವಸ್ಥೆಯಲ್ಲಿ ಸಿಕ್ಕಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.