ADVERTISEMENT

ಸಂಜಯ್ ಗಾಂಧಿ ಬೆಂಬಲಿಸದ ಆಂಟನಿ

ವಿಕಿಲೀಕ್ಸ್‌ನಿಂದ ಮತ್ತೊಂದು ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): 1976ರಲ್ಲಿ ಗುವಾಹಟಿಯಲ್ಲಿ ನಡೆದ ಎಐಸಿಸಿ ಅಧಿವೇಶನದ ಸಂದರ್ಭದಲ್ಲಿ ಸಂಜಯ್ ಗಾಂಧಿ ಅವರನ್ನು ಎ.ಕೆ. ಆಂಟನಿ ನಿಷ್ಠುರವಾಗಿ ಟೀಕಿಸಿದ್ದರು ಎಂದು ವಿಕಿಲೀಕ್ಸ್ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ.

ಈ ಮೂಲಕ ವಿಕಿಲೀಕ್ಸ್ ಭಾರತದ ರಾಜಕೀಯ ವಲಯದಲ್ಲಿ ಕೋಲಾಹಲ ಉಂಟು ಮಾಡುವ ಒಂದೊಂದೇ ಗೋಪ್ಯ ಮಾಹಿತಿಗಳ ಸುರುಳಿಯನ್ನು ಬಿಚ್ಚಲು ಮುಂದಾಗಿದೆ.
ಸ್ವೀಡನ್ ಕಂಪೆನಿಯ ಯುದ್ಧವಿಮಾನ ಖರೀದಿಯಲ್ಲಿ ರಾಜೀವ್ ಗಾಂಧಿ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಗೋಪ್ಯ ಮಾಹಿತಿಯನ್ನು ವಿಕಿಲೀಕ್ಸ್ ಎರಡು ದಿನಗಳ ಹಿಂದಷ್ಟೆ ಬಹಿರಂಗಗೊಳಿಸಿತ್ತು.

ಅಂದು ಕಾಂಗ್ರೆಸ್‌ನ ಕೇರಳ ಘಟಕದ ಮುಖ್ಯಸ್ಥರಾಗಿದ್ದ ಆಂಟನಿ ರಾಜಕೀಯದಲ್ಲಿ ಅದಾಗಲೇ ಮಿಂಚುತ್ತಿದ್ದ ಸಂಜಯ್ ಗಾಂಧಿ ಅವರನ್ನು ಬೆಂಬಲಿಸಲು ನಿರಾಕರಿಸಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಮತ್ತು ದೇಶಕ್ಕೆ ಅವರ ಕೊಡುಗೆ ಏನೆಂದು ಪ್ರಶ್ನಿಸಿದ್ದರು ಎಂದು ಅಮೆರಿಕದ ರಾಜತಾಂತ್ರಿಕ ಇಲಾಖೆಯ ತಂತಿ ಸಂದೇಶದ ಮಾಹಿತಿ ಆಧರಿಸಿ ವಿಕಿಲೀಕ್ಸ್ ಬಹಿರಂಗಪಡಿಸಿದೆ. ಆಂಟನಿ ಅವರನ್ನು ಹೊರತುಪಡಿಸಿದರೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖಂಡರಾದ ಪ್ರಿಯರಂಜನ್ ದಾಸ್‌ಮುನ್ಷಿ ಮಾತ್ರ ಸಂಜಯ್ ಅವರನ್ನು ಟೀಕಿಸಿದ್ದರು ಎಂದೂ ವಿಕಿಲೀಕ್ಸ್ ಬಹಿರಂಗಪಡಿಸಿದೆ. ಸಂಜಯ್ ಗುವಾಹಟಿ ಎಐಸಿಸಿ ಅಧಿವೇಶನ ಮತ್ತು ಯುವ ಕಾಂಗ್ರೆಸ್ ಸಮಾವೇಶದ ಕೇಂದ್ರಬಿಂದುವಾಗಿದ್ದರು. ಜೊತೆಗೆ ಇಂದಿರಾ ಗಾಂಧಿ ಬಳಿಕ ಪಕ್ಷವನ್ನು ಮುನ್ನಡೆಸುವ ಎರಡನೇ ಅತಿ ಪುಮುಖ ನಾಯಕರಾಗಿದ್ದರು ಎಂದು ತಂತಿಸಂದೇಶದಲ್ಲಿ ತಿಳಿಸಲಾಗಿತ್ತು.

`ಸಂಜಯ್, ಕೇರಳದಲ್ಲಿ ಅಷ್ಟೇನೂ ಜನಪ್ರಿಯ ನಾಯಕರಾಗಿರಲಿಲ್ಲ. ಮಾರುತಿ ಕಂಪೆನಿಯೊಂದಿಗಿನ ಸಂಬಂಧದಿಂದಾಗಿ ಸಂಜಯ್ ಅವರನ್ನು ಜನರು ಬಲ್ಲರೇ ಹೊರತು ರಾಜಕೀಯ ನಾಯಕತ್ವ ವಹಿಸುವ ಯಾವುದೇ ವರ್ಚಸ್ಸು ಅವರಿಗಿರಲಿಲ್ಲ ಎಂಬ ಅಭಿಪ್ರಾಯವನ್ನು ಅಲ್ಲಿನ ಜನರನ್ನು ಮಾತನಾಡಿಸಿದ ವೇಳೆ ಬಹುತೇಕ ಮಂದಿ ವ್ಯಕ್ತಪಡಿಸಿದ್ದರು ಎಂಬ ಅಂಶವೂ ವಿಕಿಲೀಕ್ಸ್ ಬಹಿರಂಗಪಡಿಸಿದ ಮಾಹಿತಿಯಿಂದ ಪ್ರಕಟವಾಗಿದೆ.

ಇವೆಲ್ಲದರ ನಡುವೆ ಅಂದು ಕೇರಳ ಗೃಹ ಸಚಿವರಾಗಿದ್ದ ಕೆ. ಕರುಣಾಕರಣ್ ಹಾಗೂ ಕೇರಳ ಯುವ ಕಾಂಗ್ರೆಸ್‌ನ ಒಂದು ವಿಭಾಗವು ಸಂಜಯ್ ಅವರನ್ನು ಬೆಂಬಲಿಸಿತ್ತು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.