ADVERTISEMENT

ಸಂಸದೀಯ ಸಮಿತಿಗೆ ರಾಜಾ, ಕಲ್ಮಾಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): 2ಜಿ ಹಗರಣದಲ್ಲಿ ಮುಖ್ಯ ಆರೋಪಿಯಾಗಿರುವ ಮಾಜಿ ಕೇಂದ್ರ ಸಚಿವ ಎ. ರಾಜಾ ಹಾಗೂ ಕಾಮನ್‌ವೆಲ್ತ್ ಹಗರಣದಲ್ಲಿ ಆರೋಪಿಯಾಗಿರುವ ಸುರೇಶ್ ಕಲ್ಮಾಡಿ ಅವರನ್ನು ಪ್ರತ್ಯೇಕ ಸಂಸದೀಯ ಸ್ಥಾಯಿ ಸಮಿತಿಗಳ ಸದಸ್ಯರಾಗಿ ನೇಮಿಸಲಾಗಿದೆ.

ಲೋಕಸಭೆಯಲ್ಲಿ ಡಿಎಂಕೆ ಪಕ್ಷ ಪ್ರತಿನಿಧಿಸುತ್ತಿರುವ ರಾಜಾ ಅವರನ್ನು ಇಂಧನಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಕಾಂಗ್ರೆಸ್ ಸದಸ್ಯ ಕಲ್ಮಾಡಿ ಅವರಿಗೆ ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿ ಸದಸ್ಯರ ಹುದ್ದೆ ನೀಡಲಾಗಿದೆ.

ಸಂಸದೀಯ ಸ್ಥಾಯಿ ಸಮಿತಿಗಳು ಸರ್ಕಾರ ಮಂಡಿಸುವ ಮಸೂದೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಸಚಿವಾಲಯಗಳಿಗೆ ಉದ್ದೇಶಿತ ಶಾಸನಗಳ ಕುರಿತು ಸಲಹೆ ನೀಡುತ್ತವೆ.

2ಜಿ ಹಗರಣಕ್ಕೆ ಸಂಬಂಧಿಸಿ ಕಳೆದ ವರ್ಷದ ಫೆಬ್ರುವರಿಯಲ್ಲಿ ಬಂಧಿತರಾಗಿದ್ದ ಎ. ರಾಜಾ ಈ ವರ್ಷದ ಮೇ 15ರಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಕಾಮನ್‌ವೆಲ್ತ್ ಹಗರಣದ ಆರೋಪಿಯಾಗಿ ಜೈಲು ಸೇರಿದ್ದ ಕಲ್ಮಾಡಿ ಸಹ ಈ ವರ್ಷದ ಜನವರಿಯಲ್ಲಿ ಒಂಬತ್ತು ತಿಂಗಳ ಜೈಲುವಾಸ ಮುಗಿಸಿ ಹೊರಬಂದಿದ್ದರು.

2ಜಿ ಹಗರಣಕ್ಕೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿರುವ ಡಿಎಂಕೆ ಸಂಸದೆ ಕನ್ನಿಮೊಳಿ ಸಹ ಗೃಹ ವ್ಯವಹಾರಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಸದಸ್ಯೆಯಾಗಿದ್ದಾರೆ.

ಹಲವು ಸಂಸದೀಯ ಸ್ಥಾಯಿ ಸಮಿತಿಗಳನ್ನು ಇತ್ತೀಚೆಗೆ ಪುನರ್‌ರಚಿಸಲಾಗಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಬಿಜೆಪಿ ನಾಯಕ ಯಶವಂತ್ ಸಿನ್ಹಾ ನೇತೃತ್ವದ ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಿಸಲಾಗಿದೆ.

ಇದಕ್ಕೂ ಮುನ್ನ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು.

ಅಕ್ರಮ ಹಣ ಚಲಾವಣೆಗೆ ಸಂಬಂಧಿಸಿದಂತೆ ರಾಂಚಿ ಜೈಲಿನಲ್ಲಿ ಇರುವ ಸ್ವತಂತ್ರ ಲೋಕಸಭಾ ಸದಸ್ಯ ಮಧು ಕೋಡಾ ಅವರನ್ನು ಮಾತ್ರ ಯಾವುದೇ ಸಮಿತಿ ಸದಸ್ಯರಾಗಿ ನೇಮಿಸಲಾಗಿತ್ತು.

ಸೋನಿಯಾ ಅವರ ಅನುಮತಿ ನಂತರ ಈ ನೇಮಕ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.