ಹೈದರಾಬಾದ್ (ಪಿಟಿಐ): ದೇಶದ ವಾಣಿಜ್ಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದ ಬಹುಕೋಟಿ ಸತ್ಯಂ ಹಗರಣದ ಎಲ್ಲಾ ಹತ್ತೂ ಆರೋಪಿಗಳು ತಪ್ಪಿತಸ್ಥರು ಎಂದು ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಬಿವಿಎಲ್ಎನ್ ಚಕ್ರವರ್ತಿ, ಪ್ರಕರಣದ ಎಲ್ಲಾ 10 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿದರು. ಅಲ್ಲದೇ, ಶಿಕ್ಷೆಯ ಪ್ರಮಾಣವನ್ನು ನಾಳೆ (ಶುಕ್ರವಾರ) ಪ್ರಕಟಿಸುವುದಾಗಿ ಘೋಷಿಸಿದರು.
ರಾಮಲಿಂಗಾ ರಾಜು ಅಲ್ಲದೇ, ಅವರ ಸಹೋದರ ಬಿ.ರಾಮಾ ರಾಜು,ವಡ್ಲಮನಿ ಶ್ರೀನಿವಾಸ್, ಅಡಿಟರ್ ಸುಬ್ರಮಣಿ ಗೋಪಾಲ್ ಕೃಷ್ಣನ್ ಹಾಗೂ ಟಿ. ಶ್ರೀನಿವಾಸ್, ರಾಜು ಅವರ ಮತ್ತೊಬ್ಬ ಸಹೋದರ ಬಿ. ಸೂರ್ಯನಾರಾಯಣ ರಾಜು, ಮಾಜಿ ಉದ್ಯೋಗಿಗಳಾದ ಜಿ.ರಾಮಕೃಷ್ಣ, ಡಿ. ವೆಂಕಟಪತಿ ರಾಜು ಹಾಗೂ ಶ್ರೀಸೈಲಂ ಮತ್ತು ವಿ.ಎಸ್ ಪ್ರಭಾಕರ್ ಗುಪ್ತಾ ಪ್ರಕರಣದ ಇತರ ತಪ್ಪಿತಸ್ಥರು.
2009ರ ಜನವರಿ 7ರಂದು ಈ ಹಗರಣ ಬೆಳಕಿಗೆ ಬಂದಿತ್ತು. 2009ರ ಜನವರಿ 9ರಂದು ರಾಮಲಿಂಗಾ ರಾಜು ಅವರನ್ನು ಬಂಧಿಸಲಾಗಿತ್ತು.
ಸತ್ಯಂ ಕಂಪ್ಯೂಟರ್ಸ್ ಕಂಪೆನಿ ಸಂಸ್ಥಾಪಕರೂ ಆಗಿದ್ದ ಆಗಿನ ಚೇರ್ಮನ್ ಬಿ. ರಾಮಲಿಂಗ ರಾಜು, ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದರು.
ಸುಮಾರು ಆರು ವರ್ಷಗಳ ಸುದೀರ್ಘ ವಿಚಾರಣೆಯಲ್ಲಿ 3 ಸಾವಿರ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. 226 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಪ್ರಕರಣದ ಎಲ್ಲಾ 10 ಆರೋಪಿಗಳು ಜಾಮೀನಿನ ಮೇಲೆ ಸದ್ಯ ಹೊರಗಡೆ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.