ಮುಂಬೈ (ಐಎಎನ್ಎಸ್): ಬಾಲಿವುಡ್ ನಟ ಅಮೀರ್ ಖಾನ್ ನಿರೂಪಣೆಯ ಕಿರುತೆರೆಯ ಕಾರ್ಯಕ್ರಮ `ಸತ್ಯಮೇವ ಜಯತೆ~ಯ ಪ್ರಸಾರಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಬೇಕೆಂದು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಮಂಗಳವಾರ ಆಗ್ರಹಿಸಿದರು.
ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಈ ಕುರಿತಂತೆ ಸಂಪಾದಕೀಯ ಬರೆದಿರುವ ಠಾಕ್ರೆ ~ಕಳೆದ ಭಾನುವಾರ ಪ್ರಸಾರವಾದ `ಸತ್ಯಮೇವ ಜಯತೆ~ ಕಾರ್ಯಕ್ರಮದ ಮೊದಲ ಕಂತು ದೇಶದಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಸಂಕುಚಿತ ಮನೋವೃತ್ತಿಯ ಕನ್ನಡ ಚಿತ್ರ ನಿರ್ಮಾಪಕರು ತೋರಿಸಿದ ವಿರೋಧದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾರ್ಯಕ್ರಮವನ್ನು ತಡೆಹಿಡಿಯುವ ನಿರ್ಣಯ ಕೈಗೊಳ್ಳಲಾಗಿದೆ~ ಎಂದು ಹೇಳಿದ್ದಾರೆ.
`ಮುಖ್ಯವಾಗಿ ಅಮೀರ್ ಖಾನ್, ಶಾರೂಖ್ ಖಾನ್ ಇಲ್ಲವೇ ಭಾರತದಲ್ಲಿ ಕ್ರಿಕೆಟ್ ಆಡುವ ಪಾಕಿಸ್ತಾನದ ತಂಡದಲ್ಲಿರುವ ಇತರೆ ಎಲ್ಲ ಖಾನ್ಗಳಂತಲ್ಲ~ ಎಂದು ಹೇಳಿರುವ ಠಾಕ್ರೆ `(ಅಮೀರ್) ಕಾರ್ಯಕ್ರಮ ಮತ್ತು ಸಿನಿಮಾ ಯಾವಾಗಲೂ ದೇಶಭಕ್ತಿ ಹಾಗೂ ಪ್ರೀತಿಯಲ್ಲಿ ದೇಶದ ಮೆರೆಯನ್ನು ಮೀರಿವೆ. ಅವರು ಯಾವಾಗಲೂ ಯುವಕರಿಗೆ ಸ್ಫೂರ್ತಿ~ ಎಂದು ಬರೆದಿದ್ದಾರೆ.
ನಮ್ಮ ದೃಷ್ಟಿಕೋನದಲ್ಲಿ ಪ್ರಾಂತೀಯ ಮನೋಭಾವದಿಂದ ಇಲ್ಲವೇ ಸಾರ್ವಜನಿಕರು ನೋಡದಂತೆ ಕಾರ್ಯಕ್ರಮ ತಡೆಹಿಡಿಯಬಾರದು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
`ಸತ್ಯಮೇವ ಜಯತೆ~ ಕಾರ್ಯಕ್ರಮವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಪ್ರಸಾರ ಮಾಡಲು ಬಯಸಿದ ಅಮೀರ್ ಖಾನ್ ಅವರ ನಿಲುವಿಗೆ ಕನ್ನಡ ಚಿತ್ರರಂಗದ ಹಲವು ನಟ, ನಿರ್ಮಾಪಕರು ಹಾಗೂ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಮೀರ್ ಅದರಿಂದ ಹಿಂದೆ ಸರಿದಿದ್ದನ್ನು ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.