ಲಖನೌ: ಸರಯೂ ನದಿ ತೀರದಲ್ಲಿ ಬೃಹತ್ ಶ್ರೀರಾಮ ಮೂರ್ತಿ ಪ್ರತಿಷ್ಠಾಪಿಸಲು ಯೋಗಿ ಆದಿತ್ಯಾನಾಥ ನೇತೃತ್ವದ ಸರ್ಕಾರ ಯೋಜನೆ ರೂಪಿಸಿದೆ.
ನವ್ಯ ಅಯೋಧ್ಯ ಯೋಜನೆಯ ಭಾಗವಾಗಿ 100 ಮೀಟರ್ ಎತ್ತರದ ಶ್ರೀರಾಮ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಯನ್ನು ರಾಜ್ಯಪಾಲರಾದ ರಾಮ್ ನಾಯ್ಕ್ ಅವರಿಗೆ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವನಿಶ್ ಅವಾಸ್ತಿ ವಿವರಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಿಂದ ಅನುಮತಿ ಸಿಕ್ಕ ನಂತರವಷ್ಟೇ ಶ್ರೀರಾಮ ಪ್ರತಿಮೆ ಸ್ಥಾಪಿಸಲಾಗುತ್ತದೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ದೀಪಾವಳಿ ಪ್ರಯುಕ್ತ ಅ.18ರಂದು ಆಯೋಜಿಸಲಾಗಿರುವ ಕಾರ್ಯಕ್ರಮಗಳ ಕುರಿತು ಪ್ರಸ್ತುತ ಪಡಿಸಲಾಗಿದೆ. ಅಯೋಧ್ಯೆಯಲ್ಲಿ 1.71 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಗುತ್ತದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಮುಖ ಕಟ್ಟಡ ಹಾಗೂ ವಲಯಗಳಲ್ಲಿಯೂ ದೀಪದಿಂದ ಅಲಂಕರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.
ಶ್ರೀರಾಮನ ಜನ್ಮಭೂಮಿ ಎನ್ನಲಾಗುವ ಅಯೋಧ್ಯೆಯನ್ನು ಪ್ರವಾಸಿ ಸ್ಥಳವಾಗಿ ಸೆಳೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಂಡೋನೇಷಿಯಾ ಹಾಗೂ ಥಾಯ್ಲೆಂಡ್ನ ಕಲಾವಿದರಿಂದ ರಾಮಲೀಲಾ ಪ್ರದರ್ಶನ ಆಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.