ನವದೆಹಲಿ (ಐಎಎನ್ಎಸ್): ನ್ಯಾನೊ ಸಣ್ಣ ಕಾರು ತಯಾರಿಕೆ ಕಾರ್ಖಾನೆಗೆಂದು ವಶಪಡಿಸಿಕೊಂಡಿರುವ ಕೃಷಿ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕಾಗಿರುವುದರಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆ ಜಮೀನನ್ನು ಮರಳಿ ಒಪ್ಪಿಸುವಂತೆ ಟಾಟಾ ಮೋಟಾರ್ಸ್ಗೆ ಬುಧವಾರ ಸುಪ್ರೀಂ ಕೋರ್ಟ್ ಪುನಃ ಸಲಹೆ ನೀಡಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಎಲ್.ದತ್ತು ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಭೂಮಿಯನ್ನು ಗುತ್ತಿಗೆ ಪಡೆದಿರುವ ಟಾಟಾ ಮೋಟಾರ್ಸ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರಿಗೆ `ಆ ಜಮೀನಿನಲ್ಲಿ ನೀವು ಯಾವುದೇ ರೀತಿಯ ವ್ಯವಹಾರ ನಡೆಸುತ್ತಿಲ್ಲ. ಜಮೀನಿನಿಂದ ಯಾವುದೇ ಲಾಭ ನಿರೀಕ್ಷಿಸುವಂತಿಲ್ಲ. ರೈತರಿಗೆ ಭೂಮಿ ಮರಳಿಸುವ ಸರ್ಕಾರದ ಕೆಲಸಕ್ಕೆ ಏಕೆ ಅಡ್ಡಿ ಬರುತ್ತಿದ್ದೀರಿ?' ಎಂದು ಪೀಠವು ಪ್ರಶ್ನಿಸಿತು.
ಇದೇ ವೇಳೆ ಪೀಠವು ಟಾಟಾ ಪರ ವಕೀಲರಾದ ಗೊಪಾಲ್ ಜೈನ್ ಅವರಿಗೆ ಆಗಸ್ಟ್ 6 ರಂದು ನ್ಯಾಯಾಲಯ ನೀಡಿದ್ದ ಸಲಹೆಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿತು.
ವಿಚಾರಣೆ ವೇಳೆ ಪಶ್ಚಿಮ ಬಂಗಾಳ ಸರ್ಕಾರದ ಪ್ರತಿನಿಧಿಯಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾದ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಅವರು `ಒಂದು ವೇಳೆ ಟಾಟಾ ಮೋಟಾರ್ಸ್ ರೈತರಿಗೆ ಜಮೀನು ಮರಳಿಸಿದರೆ ಪರಿಹಾರ ಹಣವನ್ನು ಹಿಂದಿರುಗಿಸಲು ಸರ್ಕಾರ ಸಿದ್ಧವಿದೆ' ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸಿಂಗೂರ್ ಭೂಮಿಗೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.