ನವದೆಹಲಿ, (ಐಎಎನ್ಎಸ್): ದೂರಸಂಪರ್ಕ ಖಾತೆಯ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಅವರು, 2 ಜಿ ಸ್ಪೆಕ್ಟ್ರಂ ಹಂಚಿಕೆಯ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಪ್ರಧಾನ ಕಚೇರಿಗೆ ಶುಕ್ರವಾರ ಬೆಳಿಗ್ಗೆ ತೆರಳಿದರು. ಅವರು ಅಲ್ಲಿ ತಮ್ಮ ಹೇಳಿಕೆ ನೀಡಲಿದ್ದಾರೆ.
ಎನ್ ಡಿ ಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅರುಣ್ ಶೌರಿ ಅವರು, 2003 ಜನವರಿಯಿಂದ 2004ರ ಮೇ ವರೆಗೆ ದೂರಸಂಪರ್ಕ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ಎಂಬ ನೀತಿಯಲ್ಲಿ ತರಂಗಾಂತರಗಳ ಹಂಚಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.
ಅವರ ಅಧಿಕಾರದ ಅವಧಿಯಲ್ಲಿ ನಡೆದ ತರಂಗಾಂತರ ಹಂಚಿಕೆಯಲ್ಲಿನ ಅರುಣ್ ಶೌರಿ ಅವರ ಪಾತ್ರದ ಕುರಿತು ಸಿಬಿಐ ವಿಚಾರಣೆ ನಡೆಸಲಿದೆ.
ಸಿಬಿಐ ಕಚೇರಿಯೊಳಗೆ ಹೋಗುವ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ಅರುಣ್ ಶೌರಿ, ಮೊದಲು ಬಂದವರಿಗೆ ಆದ್ಯತೆ ಸೇರಿದಂತೆ ದೂರಸಂಪರ್ಕ ಇಲಾಖೆಯ ನೀತಿನಿಯಮಾವಳಿ ಪಾಲನೆಯಲ್ಲಿ ತಪ್ಪೇನು ನಡೆದಿಲ್ಲ. ಸರ್ಕಾರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇಲ್ಲಿ ಮೊದಲು ಬಂದವರಿಗೆ ಆದ್ಯತೆ ಮುಖ್ಯವಲ್ಲ, ಹಣ ಮಾಡುವುದೇ ಇಲ್ಲಿನ ಪ್ರಮುಖ ಅಂಶ" ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.