ADVERTISEMENT

ಸರ್ಕಾರದ ಪ್ರಯತ್ನಕ್ಕೆ ಸಹಕಾರ: ಜೆಕೆಎಂಎಫ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 12:40 IST
Last Updated 19 ಡಿಸೆಂಬರ್ 2010, 12:40 IST

ಜಮ್ಮು (ಪಿಟಿಐ): ಕಾಶ್ಮೀರ ಕಣಿವೆಯಿಂದ ವಲಸೆಹೋದ ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರುವಲ್ಲಿ ಸರ್ಕಾರ ಮತ್ತು ಜನರು ನಡೆಸುತ್ತಿರುವ ಪ್ರಯತ್ನಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕಾಶ್ಮೀರಿ ಹಿಂದೂಗಳ ಸಂಘಟನೆ ಭರವಸೆ ನೀಡಿದೆ.

‘ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರುವಲ್ಲಿ ಸರ್ಕಾರ ನಡೆಸುತ್ತಿರುವ ಎಲ್ಲಾ ಪ್ರಯತ್ನಗಳಿಗೆ ನಾವು ಬೆಂಬಲ ನೀಡುತ್ತೇವೆ’ ಎಂದು ಜಮ್ಮು ಮತ್ತು ಕಾಶ್ಮೀರ ಅಲ್ಪಸಂಖ್ಯಾತರ ವೇದಿಕೆ (ಜೆಕೆಎಂಎಫ್) ಅಧ್ಯಕ್ಷ ಪಿ. ಎನ್. ಟಾಕ್ಕೂ ವರದಿಗಾರರಿಗೆ ತಿಳಿಸಿದರು.

ಕಾಶ್ಮೀರಿ ಪಂಡಿತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಲ್ಯಾಣ ಕಾರ್ಯಗಳನ್ನು ಸರ್ಕಾರ ಕೈಗೊಂಡಿರುವುದು ಸಂತೋಷದ ವಿಷಯವಾಗಿದೆ, ಕಾಶ್ಮೀರ ಕಣಿವೆಯ ವಿವಿಧೆಡೆ 1,700ಕ್ಕೂ ಹೆಚ್ಚು ಮಂದಿ ಯುವಕರಿಗೆ ಉದ್ಯೋಗವನ್ನು ನೀಡುವ ಸರ್ಕಾರದ ಭರವಸೆ ಸ್ವಾಗತಾರ್ಹವಾಗಿದೆ ಎಂದರು. ಶ್ರೀನಗರದಲ್ಲಿ ಸಹಜ ಸ್ಥಿತಿ: ಮೊಹರಂ ಮೆರವಣಿಗೆ ಹಿನ್ನೆಲೆಯಲ್ಲಿ ಶ್ರೀನಗರದ ಕೆಲವು ಭಾಗಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ತೆಗೆದು ಹಾಕಿರುವ ಕಾರಣ ಶನಿವಾರ ಪರಿಸ್ಥಿತಿ ಸಹಜ ಸ್ಥಿತಿ ಮರಳಿದೆ.

ಶಾಲಾ ಕಾಲೇಜು, ಖಾಸಗಿ ಕಚೇರಿಗಳು ಮತ್ತು ವಾಣಿಜ್ಯ ವಹಿವಾಟು ಹಾಗೂ ಸಂಚಾರ ವ್ಯವಸ್ಥೆ ಎಂದಿನಂತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರದ ಸುಮಾರು ಏಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ಕರ್ಫ್ಯೂ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT