ನವದೆಹಲಿ (ಪಿಟಿಐ): ಸೇನಾ ಪಡೆಗಳು ಮತ್ತು ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು ಸ್ಪಷ್ಟಪಡಿಸಿದರು.
ಗುರುವಾರ ಇಲ್ಲಿ ಆಯೋಜಿಸಿದ್ದ ಎನ್ಸಿಸಿ ವಿಚಾರ ಸಂಕಿರಣ ಉದ್ಘಾಟನೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸೇನೆ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳನ್ನು ತಳ್ಳಿಹಾಕಿದರಲ್ಲದೆ, `ಮೂರು ಸೇನಾ ಪಡೆಗಳು ಹಾಗೂ ಸರ್ಕಾರದ ಸಾಮರಸ್ಯ ಇದೆ~ ಎಂದು ತಿಳಿಸಿದರು.
`ಪ್ರಧಾನಿಯವರಿಗೆ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಬರೆದ ಪತ್ರ ಸೋರಿಕೆಯಾದುದರ ಹಿಂದೆ ಸರ್ಕಾರದ ಒಳಗಿರುವವರ ಕೈವಾಡವಿದೆಯೇ~ ಎಂಬ ಪ್ರಶ್ನೆಗೆ `ನಾನು ಇಂತಹ ಊಹಾಪೋಹದ ವರದಿಗಳಿಗೆ ಉತ್ತರ ನೀಡುವುದಿಲ್ಲ~ ಎಂದು ಹೇಳಿದರು.
ಭಾರತದ ಗಡಿಯಲ್ಲಿ ಚೀನಾ ಸೇನೆಯಲ್ಲಿನ ಕ್ಷಿಪ್ರ ಆಧುನೀಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, `ಭಾರತೀಯ ಸೇನೆಯಲ್ಲೂ ಮೂಲಸೌಲಭ್ಯ ಅಭಿವೃದ್ಧಿಯ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
`ಚೀನಾದ ಯೋಜನಾ ಗಾತ್ರವು ಭಾರತದ ನಾಲ್ಕರಷ್ಟಿದೆ. ಹಾಗಾಗಿ ಆ ದೇಶದವರು ಬೃಹತ್ ಪ್ರಮಾಣದ ಸಂಪನ್ಮೂಲಗಳನ್ನು ಸೇನೆಗಾಗಿ ಮೀಸಲಿಡುತ್ತಾರೆ. ಅಂದರೆ ನಮ್ಮ ದೇಶದ್ಲ್ಲಲಿ ಕೊರತೆ ಇದೆ ಎಂದು ಅರ್ಥವಲ್ಲ. ನಾವೂ ಸಹ ಹೊಸ ಸೌಲಭ್ಯಗಳತ್ತ ಹೆಜ್ಜೆ ಹಾಕುತ್ತಿದ್ದೇವೆ~ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.