ADVERTISEMENT

‘ಸಸ್ಯಾಹಾರಿಗಳಾಗಿ, ದೇಶೀ ಉಡುಗೆ ಧರಿಸಿ, ಕ್ರಿಕೆಟ್‌- ರಾಜಕೀಯದ ಬಗ್ಗೆ ಮಾತನಾಡಬೇಡಿ’

ಏಜೆನ್ಸೀಸ್
Published 15 ಜುಲೈ 2017, 9:41 IST
Last Updated 15 ಜುಲೈ 2017, 9:41 IST
‘ಸಸ್ಯಾಹಾರಿಗಳಾಗಿ, ದೇಶೀ ಉಡುಗೆ ಧರಿಸಿ, ಕ್ರಿಕೆಟ್‌- ರಾಜಕೀಯದ ಬಗ್ಗೆ ಮಾತನಾಡಬೇಡಿ’
‘ಸಸ್ಯಾಹಾರಿಗಳಾಗಿ, ದೇಶೀ ಉಡುಗೆ ಧರಿಸಿ, ಕ್ರಿಕೆಟ್‌- ರಾಜಕೀಯದ ಬಗ್ಗೆ ಮಾತನಾಡಬೇಡಿ’   

ನಾಗಪುರ: ‘ಸಸ್ಯಾಹಾರಿಗಳಾಗಿ, ಹುಟ್ಟುಹಬ್ಬದಂದು ಸ್ತ್ರೀಯರು ಸೀರೆ ಹಾಗೂ ಪುರುಷರು ಕುರ್ತಾ- ಪೈಜಾಮಾ ಧರಿಸಿ, ಕುಟುಂಬ ಸದಸ್ಯರೊಂದಿಗೆ ಇರುವ ಸಮಯದಲ್ಲಿ ಕ್ರಿಕೆಟ್‌ ಅಥವಾ ರಾಜಕೀಯದ ಬಗ್ಗೆ ಮಾತನಾಡಬೇಡಿ...’

- ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ‘ಕುಟುಂಬ ಪ್ರಬೋಧನೆ’ ಆಪ್ತಸಲಹಾ ಕಾರ್ಯಕ್ರಮದ ಸಲಹೆಗಳಿವು.

‘ಜೀವನ ತತ್ವ ಹಾಗೂ ಮೌಲ್ಯಗಳ’ ಬಗ್ಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಮನೆಮನೆಗೆ ತೆರೆಳಿ ಆಪ್ತ ಸಲಹೆ ನೀಡುತ್ತಿರುವ ‘ಕುಟುಂಬ ಪ್ರಬೋಧನೆ’ ಕಾರ್ಯಕ್ರಮದಲ್ಲಿ ಈ ರೀತಿಯ ಸಲಹೆಗಳನ್ನು ನೀಡಲಾಗುತ್ತಿದೆ.

ADVERTISEMENT

‘ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿರುವಾಗ ಟಿವಿ ನೋಡುವುದನ್ನು ಬಿಡಿ. ಹುಟ್ಟು ಹಬ್ಬ ಆಚರಿಸಿಕೊಳ್ಳುವ ವೇಳೆ ಮೇಣದ ಬತ್ತಿಯನ್ನು ಊದಿ ಆರಿಸುವುದು, ಕೇಕ್ ಕತ್ತರಿಸುವುದು - ಇವೆಲ್ಲಾ ಪಾಶ್ಚಿಮಾತ್ಯ ಸಂಸ್ಕೃತಿ. ಈ ರೀತಿಯ ಆಚರಣೆಗಳನ್ನು ಬಿಡಿ’ ಎಂದು ಸ್ವಯಂಸೇವರು ಸಲಹೆ ನೀಡುತ್ತಿದ್ದಾರೆ.

ಹಿರಿಯ ಸ್ವಯಂಸೇವಕರು ಒಬ್ಬ ಅಥವಾ ಇಬ್ಬರು ಸ್ವಯಂಸೇವಕರು ಹಾಗೂ ಒಬ್ಬ ಸ್ವಯಂಸೇವಕಿ (ಆರ್‌ಎಸ್ಎಸ್‌ನ ಮಹಿಳಾ ಘಟಕವಾದ ರಾಷ್ಟ್ರೀಯ ಸೇವಿಕಾ ಸಂಘ) ಜತೆಗೆ ಮನೆಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ‘ಭಾರತೀಯ ಸಂಸ್ಕೃತಿ’ಯ ಬಗ್ಗೆ ‘ತಿಳಿವಳಿಕೆ’ ನೀಡುತ್ತಿದ್ದಾರೆ.

ಏಪ್ರಿಲ್‌ ತಿಂಗಳಿಂದ ಈ ಆಪ್ತಸಲಹಾ ಕಾರ್ಯಕ್ರಮ ನಡೆಯುತ್ತಿದೆ. 2019ರ ಸಾರ್ವತ್ರಿಕ ಚುನಾವಣೆಯವರೆಗೂ ಈ ಕಾರ್ಯಕ್ರಮ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಆರ್‌ಎಸ್‌ಎಸ್‌ ಮೂಲಗಳು ತಿಳಿಸಿವೆ.

‘ನಮ್ಮ ಸಂಸ್ಕೃತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಂ ಕುಟುಂಬಗಳಿಗೂ ನಾವು ಈ ನೆಲದ ಸಂಸ್ಕೃತಿಯ ಬಗ್ಗೆ ತಿಳಿಹೇಳುತ್ತಿದ್ದೇವೆ’ ಎಂದು ಆರ್‌ಎಸ್‌ಎಸ್‌ನ ಹಿರಿಯ ಸ್ವಯಂಸೇವಕ ಅತುಲ್‌ ಪಿಂಗ್ಲೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.