ಚೆನ್ನೈ(ಪಿಟಿಐ): ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಚುನಾವಣಾ ಆಯೋಗ ನಿಯೋಜಿಸಿರುವ ಸಮಿತಿಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿ ಪ್ರವೀಣ ಕುಮಾರ ಹೇಳಿದ್ದಾರೆ.
‘ಎಐಡಿಎಂಕೆ ಸಾಮಾಜಿಕ ಮಾಧ್ಯಮದಲ್ಲಿ ನಡೆಸಲು ಉದ್ದೇಶಿಸಿರುವ ಚುನಾವಣಾ ಪ್ರಚಾರದ ಕುರಿತು ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗ ಹೇಳಿದೆ. ಪಕ್ಷವು ತನ್ನ ಪ್ರಚಾರ ವಿಷಯಗಳನ್ನು ಒಳಗೊಂಡ ಸಿಡಿಯನ್ನು ಚುನಾವಣಾ ಆಯೋಗಕ್ಕೆ ನೀಡುತ್ತದೆ. ಚುನಾವಣಾ ಆಯೋಗದಿಂದ ಈ ಉದ್ದೇಶಕ್ಕಾಗಿಯೇ ನಿಯೋಜಿತಗೊಂಡ ಸಮಿತಿಯ ಸಿಡಿಯನ್ನು ವೀಕ್ಷಿಸುತ್ತದೆ’ ಎಂದು ಪ್ರವೀಣ ಹೇಳಿದ್ದಾರೆ.
ಫೇಸ್ಬುಕ್ ಮೊರೆ ಹೋದ ಸಿಬಲ್
ನವದೆಹಲಿ ವರದಿ: ಚುನಾವಣಾ ಕಾವು ಏರುತ್ತಿದ್ದಂತೆಯೇ ಕೇಂದ್ರ ಕಾನೂನು ಮತ್ತು ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.
ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ನಡೆಸುತ್ತಿರುವ ಅಪಪ್ರಚಾರಕ್ಕೆ ಫೇಸ್ಬುಕ್ ಮೂಲಕ ಉತ್ತರಿಸುತ್ತಿದ್ದಾರೆ.
ಚುನಾವಣಾ ವೇಳೆ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ಸರಿಯಾದ ಮಾಹಿತಿಯನ್ನು ಅವರಿಗ ತಲುಪಿಸಲು ಸಾಮಾಜಿಕ ಜಾಲತಾಣಗಳ ಅಗತ್ಯವಿದೆ ಎಂದು ಸಿಬಲ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ಫೇಸ್ಬುಕ್ ಮೂಲಕ ಹೆಚ್ಚು ಜನರನ್ನು ತಲುಪಬಹುದು. ಬಿಜೆಪಿಯ ರಾಜಕೀಯ ಪ್ರೇರಿತ ಅಪಪ್ರಚಾರ ತಡೆಯಲು ಮತ್ತು ನನ್ನ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಲು ಫೇಸ್ಬುಕ್ ಅನುಕೂಲವಾಗಲಿದೆ’ ಎಂದು ಸಿಬಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.