ADVERTISEMENT

ಸಾರ್ಕ್‌ ದೇಶಗಳ ಹಣಕಾಸು ಸಚಿವರ ಸಮಾವೇಶದಲ್ಲಿ ಜೇಟ್ಲಿ ಭಾಗವಹಿಸುವುದಿಲ್ಲ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 12:42 IST
Last Updated 16 ಆಗಸ್ಟ್ 2016, 12:42 IST
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ   

ಇಸ್ಲಾಮಾಬಾದ್‌: ಈ ತಿಂಗಳ ಅಂತ್ಯಕ್ಕೆ ನಡೆಯಲಿರುವ ಸಾರ್ಕ್‌ ದೇಶಗಳ ಹಣಕಾಸು ಸಚಿವರ  ಸಮಾವೇಶದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಭಾಗವಹಿಸುವುದಿಲ್ಲ.

ಸರಕಾರದ ಮೂಲಗಳ ಪ್ರಕಾರ ಆಗಸ್ಟ್ 25-26 ರಂದು  ಇಸ್ಲಾಮಾಬಾದ್‍ನಲ್ಲಿ  ನಡೆಯಲಿರುವ ಸಮಾವೇಶದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಭಾರತವನ್ನು ಪ್ರತಿನಿಧಿಕರಿಸಲಿದ್ದಾರೆ.

ಸಮಾವೇಶದಲ್ಲಿ ಭಾಗವಹಿಸಲಿರುವ ಸಚಿವ ಅರುಣ್ ಜೇಟ್ಲಿ ಅವರಿಗೆ ಉತ್ತಮ ಆತಿಥ್ಯ ನೀಡಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಎರಡು ದಿನಗಳ ಹಿಂದೆಯಷ್ಟೇ ಪಾಕ್ ಸರಕಾರದ ಮೂಲಗಳು ಹೇಳಿದ್ದವು.

ಈ ಹಿಂದೆ ರಾಜ್‍ನಾಥ್ ಸಿಂಗ್ ಪಾಕಿಸ್ತಾನ ಪ್ರವಾಸದ ವೇಳೆ ಪ್ರತಿಭಟನೆಯ ಮುಜುಗರ ಅನುಭವಿಸಿದ್ದರು. ಆದರೆ ಅವರಿಗೆ ಎದುರಾದಂತೆ ಪ್ರತಿಭಟನೆಯ ಮುಜುಗರ ಪುನರಾವರ್ತನೆಯಾಗುವುದನ್ನು ತಪ್ಪಿಸಲು ಪಾಕಿಸ್ತಾನ ಉದ್ದೇಶಿಸಿದೆ ಎಂದು ಪಾಕ್ ಹೇಳಿಕೆ ನೀಡಿತ್ತು.


ಏನಿದು ಘಟನೆ?:  ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು ಪಾಕಿಸ್ತಾನ ಪ್ರವಾಸದ ವೇಳೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಸಿಂಗ್, ಉಗ್ರರನ್ನು ಹುತಾತ್ಮರೆಂದು ವೈಭವೀಕರಿಸಬೇಡಿ ಎಂದು ಹೇಳಿದ್ದರು. ಈ ವಿಷಯದಿಂದ ಕುಪಿತಗೊಂಡ ಪಾಕ್, ಸಿಂಗ್ ಭಾಷಣವನ್ನು ಪ್ರಸಾರ ಮಾಡಬೇಡಿ ಎಂದು ಸುದ್ದಿ ಮಾಧ್ಯಮಗಳಿಗೆ ತಾಕೀತು ನೀಡಿತ್ತು.

ನನ್ನ ಭಾಷಣವನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವೋ ಇಲ್ಲವೋ ಎಂದು ಗೊತ್ತಿಲ್ಲ. ಭಾರತದಿಂದ ಡಿಡಿ, ಎಎನ್‍ಐ ಮತ್ತು ಪಿಟಿಐ ವರದಿಗಾರರು ಅಲ್ಲಿಗೆ ಬಂದಿದ್ದರೂ ಅವರನ್ನು ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸಲು ಬಿಡಲಿಲ್ಲ ಎಂದು ಸಿಂಗ್ ಸಂಸತ್‍ನಲ್ಲಿ ತಿಳಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.