ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಬೇಡ: ಖಟ್ಟರ್‌

​ಪ್ರಜಾವಾಣಿ ವಾರ್ತೆ
Published 6 ಮೇ 2018, 20:29 IST
Last Updated 6 ಮೇ 2018, 20:29 IST
ಮನೋಹರ ಲಾಲ್
ಮನೋಹರ ಲಾಲ್   

ಚಂಡಿಗಡ: ಬಲಪಂಥೀಯ ಗುಂಪುಗಳು ಗುರುಗ್ರಾಮದ ಕೆಲವು ಕಡೆಗಳಲ್ಲಿ ನಮಾಜ್‌ಗೆ ಅಡ್ಡಿ ಮಾಡುತ್ತಿವೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿರುವ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌, ‘ಮಸೀದಿ, ಈದ್ಗಾ ಮೈದಾನಗಳು ಅಥವಾ ಖಾಸಗಿ ಸ್ಥಳಗಳಲ್ಲಿಯೇ ನಮಾಜ್‌ ಮಾಡಬೇಕು’ ಎಂದು ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಬದ್ಧ ಎಂದು ಅವರು ತಿಳಿಸಿದ್ದಾರೆ.

ಭೂಕಬಳಿಕೆಯ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಮಾಡಲಾಗುತ್ತಿದೆ ಎಂದು ಆರೋಪಿಸಿ ಎರಡು ವಾರಗಳಿಂದ ಶುಕ್ರವಾರದ ನಮಾಜ್‌ಗೆ ಕೆಲವು ಗುಂಪುಗಳು ಅಡ್ಡಿಪಡಿಸಿವೆ.

ADVERTISEMENT

‘ವಜೀರಾಬಾದ್, ಅತುಲ್ ಕಟಾರಿಯಾ ಚೌಕ್, ಸೈಬರ್ ಪಾರ್ಕ್, ಭಕ್ತವಾರ್ ಚೌಕ್‌ ಹಾಗೂ ನಗರದ ದಕ್ಷಿಣ ಭಾಗದಲ್ಲಿ ನಮಾಜ್‌ಗೆ ಅಡ್ಡಿ ಮಾಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಹಿಂದೂ ಕ್ರಾಂತಿ ದಳ, ಗೋ ರಕ್ಷಕ ದಳ ಹಾಗೂ ಶಿವಸೇನಾ ಕಾರ್ಯಕರ್ತರು ಈ ರೀತಿ ಮಾಡುತ್ತಿರುವ ಆರೋಪ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದು ಹೆಚ್ಚುತ್ತಿದೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಈ ಕುರಿತು ನಿಗಾವಹಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರದ ನಮಾಜ್‌ ನಡೆಸುವುದು ಹೆಚ್ಚಾಗುತ್ತಿದೆ. ಕೆಲವು ವ್ಯಕ್ತಿಗಳು ಅಥವಾ ಇಲಾಖೆಗಳಿಂದ ಇದಕ್ಕೆ ಆಕ್ಷೇಪ ಇರಬಹುದು. ಹಾಗಾಗಿ ನಿಯೋಜಿತ ಸ್ಥಳಗಳಲ್ಲಿಯೇ ನಮಾಜ್‌ ಮಾಡಬೇಕು. ಎಲ್ಲಿಯವರೆಗೆ ಆಕ್ಷೇಪ ಇರುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆ ಇರುವುದಿಲ್ಲ. ವ್ಯಕ್ತಿಗಳು ಅಥವಾ ಇಲಾಖೆಗಳಿಂದ ಆಕ್ಷೇಪ ವ್ಯಕ್ತವಾದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಖಟ್ಟರ್‌ ಹೇಳಿದ್ದಾರೆ.

ಗುರುಗ್ರಾಮದಲ್ಲಿ ರಸ್ತೆಬದಿ, ಉದ್ಯಾನವನ ಹಾಗೂ ಖಾಲಿ ಇರುವ ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಮಾಡಲು ಅನುಮತಿ ಇಲ್ಲ ಎಂದಿರುವ ಬಲಪಂಥೀಯ ಸಂಘಟನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ‘ಅನಧಿಕೃತ’ವಾಗಿ ಪ್ರಾರ್ಥನೆ ನಡೆಸುವುದನ್ನು ಆಡಳಿತ ತಡೆಯದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.