ನವದೆಹಲಿ: ಹನ್ನೆರಡನೆಯ ತರಗತಿಯ ಅರ್ಥಶಾಸ್ತ್ರ ಪತ್ರಿಕೆಯ ಉತ್ತರಗಳನ್ನು ಒಳಗೊಂಡ ಅನಾಮಧೇಯ ಲಕೋಟೆ ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ)ಗೆ ಮಾ.26ರಂದು ಬಂದಿರುವುದಾಗಿ ದೆಹಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಿಬಿಎಸ್ಇ ಉಲ್ಲೇಖಿಸಿದೆ.
10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿರುವ ದೆಹಲಿ ಪೊಲೀಸ್ ಇಲಾಖೆಯ ಕ್ರೈಂ ವಿಭಾಗ ತನಿಖೆ ನಡೆಸುತ್ತಿದೆ.
ರಾಜಿಂದರ್ ನಗರದಲ್ಲಿ ತರಬೇತಿ ಸಂಸ್ಥೆ ನಡೆಸುತ್ತಿರುವ ವ್ಯಕ್ತಿಯೊಬ್ಬ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಕುರಿತು ಮಾ.23ರಂದು ಅನಾಮಧೇಯ ಮೂಲದಿಂದ ಫ್ಯಾಕ್ಸ್ ಮೂಲಕ ಮಂಡಳಿಗೆ ದೂರು ಸಲ್ಲಿಕೆಯಾಗಿತ್ತು ಎಂದು ಸಿಬಿಎಸ್ಇ ಹೇಳಿದೆ.
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ರಾಜಿಂದರ್ ನಗರದ ಎರಡು ಶಾಲೆಗಳ ಕುರಿತಾಗಿಯೂ ದೂರಿನಲ್ಲಿ ಪ್ರಸ್ತಾಪಿಸಲಾಗಿತ್ತು. ಇನ್ನು ಮಾ.26ರಂದು ಸಿಬಿಎಸ್ಇಗೆ ತಲುಪಿರುವ ಲಕೋಟೆಯಲ್ಲಿ ಅರ್ಥಶಾಸ್ತ್ರ ವಿಷಯದ ಪ್ರಶ್ನೆಗಳಿಗೆ ನಾಲ್ಕು ಪುಟಗಳ ಉತ್ತರವಿತ್ತು. ವಾಟ್ಸ್ಆ್ಯಪ್ ಗುಂಪುಗಳಲ್ಲಿ ಪ್ರಶ್ನೆಪತ್ರಿಕೆ ಹರಿದಾಡಿರುವ ಸುಳಿವು ನೀಡಲಾಗಿತ್ತು.
ದೇಶದಾದ್ಯಂತ ಬುಧವಾರ ನಡೆದ 10ನೇ ತರಗತಿಯ ಗಣಿತ ಮತ್ತು ಮಾರ್ಚ್ 26ರಂದು ನಡೆದಿದ್ದ 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳ ಮರು ಪರೀಕ್ಷೆ ನಡೆಸುವುದಾಗಿ ಸಿಬಿಎಸ್ಇ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.