ನವದೆಹಲಿ (ಪಿಟಿಐ): ಪಿ.ಜೆ. ಥಾಮಸ್ ಅವರನ್ನು ಸಿವಿಸಿಯಾಗಿ ಮಾಡಿದ ನೇಮಕವು ~ಒಂದು ತಪ್ಪು ತೀರ್ಮಾನವಾಗಿತ್ತು~ ಎಂದು ಸೋಮವಾರ ಲೋಕಸಭೆಯಲ್ಲಿ ಹೇಳಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ~ಇದರ ಪೂರ್ಣ ಹೊಣೆಯನ್ನು ನಾನು ಹೊರುವೆ~ ಎಂದು ಘೋಷಿಸಿದರು.
ಎಡಪಕ್ಷಗಳು ಪ್ರಧಾನಿಯ ಹೇಳಿಕೆಯಿಂದ ತೃಪ್ತಿಯಾಗದೇ ಸಭಾತ್ಯಾಗ ಮಾಡಿದವು.
~ಜಮ್ಮುವಿನಲ್ಲಿ ಏನು ಹೇಳಿದ್ದೇನೋ ಅದನ್ನು ಪುನರಾವರ್ತಿಸಲು ನಾನು ಹಿಂಜರಿಯುವುದಿಲ್ಲ. ನಿಶ್ಚಿತವಾಗಿ ಇದೊಂದು ತಪ್ಪು ತೀರ್ಮಾನವಾಗಿತ್ತು. ನಾನು ಅದರ ಪೂರ್ಣ ಜವಾಬ್ದಾರಿ ಹೊರುವೆ~ ಎಂದು ಸಿಂಗ್ ಹೇಳಿದರು.
ಪ್ರಧಾನಿಯವರು ಸ್ವ ಇಚ್ಛೆಯ ಹೇಳಿಕೆ ನೀಡಿದ್ದನ್ನು ವಿರೋಧ ಪಕ್ಷಗಳು ಪ್ರತಿಭಟಿಸಿದಾಗ ಸಿಂಗ್ ಈ ಘೋಷಣೆ ಮಾಡಿದರು.
ಪ್ರಧಾನಿ ಮಾಡಿದ ಸ್ವ ಇಚ್ಛೆಯ ಹೇಳಿಕೆಯಲ್ಲಿ ಹೊಣೆಗಾರಿಕೆಯ ಪ್ರಸ್ತಾವವೇ ಇರಲಿಲ್ಲ. ಕೇವಲ ಥಾಮಸ್ ಅವರನ್ನು ಕೇಂದ್ರೀಯ ಜಾಗೃತಾ ಆಯುಕ್ತರಾಗಿ (ಸಿವಿಸಿ) ನೇಮಕ ಮಾಡಿದ್ದಕ್ಕೆ ಪೂರ್ವದ ಘಟನಾವಳಿಗಳು ಮತ್ತು ಕಳೆದ ವಾರ ಸುಪ್ರೀಂಕೋರ್ಟ್ ಈ ನೇಮಕಾತಿಯನ್ನು ರದ್ದು ಪಡಿಸಿದ ಸಂದರ್ಭಗಳ ವಿವರಣೆಯನ್ನಷ್ಟೇ ಹೇಳಿಕೆಯಲ್ಲಿ ವಿವರಿಸಲಾಗಿದ್ದುದನ್ನು ಕಂಡು ವಿರೋಧ ಪಕ್ಷಗಳು ಕೋಲಾಹಲ ಎಬ್ಬಿಸಿದವು.
~ನಾವು ಸುಪ್ರೀಂಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇವೆ ಮತ್ತು ಅಂಗೀಕರಿಸುತ್ತೇವೆ. ಹೊಸ ಸಿವಿಸಿ ನೇಮಕಾತಿ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ಸರ್ಕಾರವು ಪಾಲಿಸುತ್ತದೆ~ ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.