ADVERTISEMENT

ಸಿವಿಸಿ ಮುಂದೆ ಹಾಜರಾಗಲು ತನಿಖಾ ಸಂಸ್ಥೆಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗಳ ಸ್ಥಿತಿಗತಿಗಳ ವರದಿ ನೀಡಲು ಮತ್ತು ಮುಂದೆ ನಡೆಸಬೇಕಾಗಿರುವ ತನಿಖೆಯ ನೀಲನಕ್ಷೆ ಕುರಿತಂತೆ ಚರ್ಚಿಸಲು ತನ್ನ ಮುಂದೆ ಹಾಜರಾಗುವಂತೆ ಕೇಂದ್ರ ಜಾಗೃತ ಆಯೋಗವು (ಸಿವಿಸಿ) ತನಿಖಾ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದೆ.

2ಜಿ ಹಗರಣದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಮಂಗಳವಾರದಿಂದ  ಹಾಜರಾಗುವಂತೆ ಸಿವಿಸಿಯು ಜಾರಿ  ನಿರ್ದೇಶನಾಲಯ (ಇಡಿ) ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಸಿಬಿಐ ಮುಖ್ಯಸ್ಥರಿಗೆ ಸೂಚಿಸಿದೆ ಪ್ರಗತಿಯಲ್ಲಿರುವ ತನಿಖೆಯ ಕುರಿತಾಗಿ ವಿಸ್ತೃತ ವಿವರಣೆ ನೀಡಲು ಅವಕಾಶ ಕಲ್ಪಿಸುವ ಸಲುವಾಗಿ ಮೂರೂ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರತ್ಯೇಕ ದಿನಗಳಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2ಜಿ ತನಿಖೆಯ ಸ್ಥಿತಿಗತಿ ವರದಿಗಳನ್ನು ಸಿವಿಸಿಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ಮಾತುಕತೆ ಏರ್ಪಡಿಸಲಾಗಿದೆ.ಸಿಬಿಐ ಮುಖ್ಯಸ್ಥರು ಮಂಗಳವಾರ ಸಿವಿಸಿ ಮುಂದೆ ಹಾಜರಾಗಿ ತನಿಖೆಯ ಪ್ರಗತಿಯ ಕುರಿತಂತೆ ವಿವರಣೆ ನೀಡಲಿದ್ದಾರೆ.

ಜಾರಿ ನಿರ್ದೇಶನಾಲಯ ಫೆ. 22 ಮತ್ತು ಆದಾಯ ತೆರಿಗೆ ಇಲಾಖೆ 24ರಂದು ತನಿಖೆಯ ಸ್ಥಿತಿಗತಿ ವರದಿಗಳನ್ನು ಸಲ್ಲಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.