ನವದೆಹಲಿ: ಸೀಮೆಎಣ್ಣೆ ಖರೀದಿಗೆ ಸಹಾಯಧನ ಹಾಗೂ ಅಟಲ್ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.
ಸೀಮೆಎಣ್ಣೆ ಸಹಾಯಧನ ಪಡೆಯುತ್ತಿರುವವರು ಅಥವಾ ಅಟಲ್ ಪಿಂಚಣಿ ಯೋಜನೆ ಸೌಲಭ್ಯ ಹೊಂದಿರುವವರು ಆಧಾರ್ ಸಂಖ್ಯೆ ನೀಡಬೇಕು.
ಇಲ್ಲವಾದಲ್ಲಿ ಈ ಸೌಲಭ್ಯಗಳನ್ನು ಪಡೆಯುವುದನ್ನು ಮುಂದುವರಿಸಲು ಆಧಾರ್ ಸಂಖ್ಯೆ ಪಡೆಯಲು ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಅಟಲ್ ಪಿಂಚಣಿ ಯೋಜನೆಗೆ ಹಾಗೂ ಸೀಮೆಎಣ್ಣೆ ಸಹಾಯಧನಕ್ಕೆ ಆಧಾರ್್ ನೀಡಲು ಕ್ರಮವಾಗಿ ಜೂನ್ 15 ಹಾಗೂ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಆದರೆ ಆಧಾರ್ ಸಂಖ್ಯೆ ನೀಡುವ ತನಕ ಸೌಲಭ್ಯ ಪಡೆಯುವ ಸಲುವಾಗಿ ಪಡಿತರ ಚೀಟಿ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಭಾವಚಿತ್ರ ಇರುವ ಕಿಸಾನ್ ಪಾಸ್ಬುಕ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ನೀಡಲಾದ ಉದ್ಯೋಗ ಚೀಟಿ, ಗೆಜೆಟೆಡ್ ಅಧಿಕಾರಿ ಅಥವಾ ತಹಶೀಲ್ದಾರ್ ನೀಡಿರುವ ಪ್ರಮಾಣಪತ್ರವನ್ನು ಗುರುತಿನ ಚೀಟಿ ಎಂದು ಪರಿಗಣಿಸಲಾಗುತ್ತದೆ.
ಸಹಾಯಧನ ವಿತರಿಸಲು ಪಡಿತರ ಚೀಟಿಯೊಂದಿಗೆ ಅಥವಾ ಬ್ಯಾಂಕ್್ ಖಾತೆ ಜತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.