ನವದೆಹಲಿ (ಪಿಟಿಐ): ನ್ಯಾಯಾಲಯ ಆದೇಶಿಸಿದರೂ ಹೂಡಿಕೆದಾರರ ಹಣ ಹಿಂದಿರುಗಿಸಲು ವಿಫಲವಾಗಿ ಬಂಧನಕ್ಕೊಳಗಾಗಿರುವ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಬುಧವಾರ ಸುಪ್ರೀಂ ಕೋರ್ಟ್ ಮೋರೆಹೋಗಿದ್ದಾರೆ.
ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಅವರ ನೇತೃತ್ವದ ಪೀಠದ ಮುಂದೆ ಸುಬ್ರತೊ ಪರ ಹಾಜರಾದ ಹಿರಿಯ ವಕೀಲ ರಾಮ ಜೇಠ್ಮಲಾನಿ ಅವರು ತಮ್ಮ ಈ ಅರ್ಜಿಯನ್ನು ಹೇಬಿಯಸ್ ಕಾರ್ಪಸ್ ಎಂದು ಪರಿಗಣಿಸಿ ತುರ್ತಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಇದೇ ವೇಳೆ ಜೇಠ್ಮಲಾನಿ ಅವರು `ಕೆಲ ದೋಷಗಳನ್ನು ತಕ್ಷಣವೇ ಸರಿಪಡಿಸುವ ಅಗತ್ಯವಿದೆ' ಎಂದು ಹೇಳಿದರು. ನಂತರ ಪೀಠವು ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿತು.
ಭೋಜನ ವಿರಾಮದ ನಂತರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಪೀಠವು ಜೇಠ್ಮಲಾನಿ ಅವರ ವಾದವನ್ನು ಆಲಿಸಿ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.