ADVERTISEMENT

ಸೆನ್ ವಿರುದ್ಧ ಆರೋಪ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 11:20 IST
Last Updated 30 ಡಿಸೆಂಬರ್ 2010, 11:20 IST

ಅಗರ್ತಲಾ (ಐಎಎನ್‌ಎಸ್): ಛತ್ತೀಸ್‌ಗಡ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾನವ ಹಕ್ಕುಗಳ ಹೋರಾಟಗಾರ ವಿನಾಯಕ ಸೆನ್ ವಿರುದ್ಧ ಹೊರಿಸಲಾದ ದೇಶದ್ರೋಹದ ಸುಳ್ಳು ಆಪಾದನೆಗಳನ್ನು ಕೈಬಿಡುವಂತೆ ಆಗ್ರಹಿಸಿರುವ ಈಶಾನ್ಯ ಭಾರತದ ಮಾನವ ಹಕ್ಕುಗಳ ಸಂಘಟನೆಗಳು, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಬುಧವಾರ ಕೇಂದ್ರ ಮತ್ತು ಛತ್ತೀಸ್‌ಗಡ ಸರ್ಕಾರಗಳನ್ನು ಒತ್ತಾಯಿಸಿವೆ.

ಭಯೋತ್ಪಾದನೆ ವಿರೋಧಿ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ನಡೆದಿರುವ ಹೋರಾಟಗಳನ್ನು ಹತ್ತಿಕ್ಕುವ ಸಂಚು ಇದಾಗಿದ್ದು ಅವರ ವಿರುದ್ಧ ದೇಶದ್ರೋಹದಂತಹ ಸುಳ್ಳು ಆಪಾದನೆ ಮಾಡಲಾಗಿದೆ ಎಂದು ತ್ರಿಪುರಾ ಮಾನವ ಹಕ್ಕುಗಳ ಹೋರಾಟ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ರಾಯ್ ಬರ್ಮನ್ ಅವರು ಆರೋಪಿಸಿದ್ದಾರೆ.

40 ವರ್ಷಗಳಿಂದ ಛತ್ತೀಸ್‌ಗಡ ಬಡವರು ಮತ್ತು ಕೆಳವರ್ಗದ ಜನರ ನಿಸ್ವಾರ್ಥ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿರುವ ಮಕ್ಕಳ ವೈದ್ಯ ಸೆನ್ ಅವರಿಗೆ ನ್ಯಾಯಾಲಯ ಕೇವಲ ಶಂಕೆ ಮತ್ತು ಊಹಾಪೋಹಗಳ ಆಧಾರ ಮೇಲೆ ಶಿಕ್ಷೆ ವಿಧಿಸಿದೆಯೇ ಹೊರತು ಸೂಕ್ತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಲ್ಲ ಎಂದಿದ್ದಾರೆ.

ಸೆನ್ ಅವರಂತಹ ಅಮಾಯಕರಿಗಾದ ಅನ್ಯಾಯವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ ಬರ್ಮನ್, ಅಲ್ಲಿ ಅವರಿಗೆ ನ್ಯಾಯ ದೊರೆಯುವ ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.