ನವದೆಹಲಿ: ಗಡಿ ಭಾಗದಲ್ಲಿ ಬೀಡು ಬಿಟ್ಟಿರುವ ಸೇನೆಯನ್ನು ತಕ್ಷಣವೇ ಹಾಗೂ ಬೇಷರತ್ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಯಾವುದೇ ಮಾತುಕತೆ ಇಲ್ಲ ಎಂದು ಚೀನಾ ಭಾರತಕ್ಕೆ ತಾಕೀತು ಮಾಡಿದೆ.
ಉಭಯ ರಾಷ್ಟ್ರಗಳ ನಡುವೆ ಸೌಹಾರ್ದ ಮಾತುಕತೆಗೂ ಮುನ್ನ ಭಾರತೀಯ ಸೇನೆ ಸಿಕ್ಕಿಂ ಭಾಗದಲ್ಲಿ ಬೀಡುಬಿಟ್ಟಿರುವ ತನ್ನ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಚೀನಾ ರಾಜತಾಂತ್ರಿಕ ಸಲಹೆಗಾರ ಲಿ ಯಾ ಭಾರತವನ್ನು ಒತ್ತಾಯಿಸಿದ್ದಾರೆ.
ಚೀನಾ ರಾಯಭಾರಿ ಕಚೇರಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಗಡಿ ಸಮಸ್ಯೆ ಕುರಿತು ಮಾತನಾಡಿರುವ ಲಿ , ಬೇಷರತ್ತಾಗಿ ಈ ಕೂಡಲೇ ಭಾರತೀಯ ಪ್ರದೇಶದೊಳಗೆ ಸೇನೆಯನ್ನು ಭಾರತ ಕರೆಸಿಕೊಳ್ಳಬೇಕು. ಉಭಯ ರಾಷ್ಟ್ರಗಳ ನಡುವಿನ ಯಾವುದೇ ಅರ್ಥಪೂರ್ಣ ಮಾತುಕತೆಗೂ ಮುನ್ನ ಇದಾಗಬೇಕು ಎಂದಿದ್ದಾರೆ.
ಡೊಕ್ಲಾಮ್ ಪ್ರದೇಶವು ಭೂತಾನ್ಗೆ ಸೇರಿದ್ದು ಎನ್ನುವ ಭಾರತದ ವಾದಕ್ಕೆ ಯಾವುದೇ ಬೆಂಬಲವಿಲ್ಲ. ಈ ವಲಯ ಚೀನಾಗೆ ಸೇರಿದ್ದು ಎನ್ನಲು ಬಲವಾದ ದಾಖಲೆಗಳಿವೆ. ಇಲ್ಲಿನ ಸಂಪ್ರದಾಯವು ಚೀನಾ ಗಡಿಭಾಗಕ್ಕೆ ಸಾಕ್ಷ್ಯ ಒದಗಿಸುತ್ತಿದ್ದು, ಚೀನಾ ಗಡಿ ಭದ್ರತಾ ಪಡೆಯು ಪಹರೆ ನಡೆಸುತ್ತಿದೆ ಎಂದು ಪ್ರಸ್ತಾಪಿಸಿದ್ದಾರೆ.
ಜೂನ್ 18ರಂದು ಅತಿಕ್ರಮಣ ಪ್ರವೇಶ ಮಾಡಿರುವ ಭಾರತೀಯ ಸೇನೆ ಇಲ್ಲಿನ ವಾತಾವರಣ ಬದಲಿಸಿದೆ. ಸಿಕ್ಕಿಂ ಮತ್ತು ಟಿಬೆಟ್ ವಲಯಗಳಿಗೆ ಸಂಬಂಧಿಸಿದಂತೆ 1890ರಲ್ಲಿ ಆಗಿರುವ ಚೀನಾ ಹಾಗೂ ಬ್ರಿಟಿಷರ ನಡುವಿನ ಒಪ್ಪಂದದ ಅನ್ವಯ ಡೊಕ್ಲಾಮ್ ಚೀನಾಗೆ ಸೇರಿದ್ದಾಗಿದೆ ಎಂದಿರುವುದಾಗಿ ಎಎನ್ಐ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.