ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ನಿಯೋಜಿಸಲಾಗಿರುವ ಯೋಧರ ಜತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಆಚರಿಸಿದರು. ಯೋಧರ ಶ್ರಮ ಮತ್ತು ತ್ಯಾಗವನ್ನು ಹೊಗಳಿದ ಪ್ರಧಾನಿ, ಅವರನ್ನು ತಮ್ಮ ಕುಟುಂಬದ ಭಾಗವೆಂದೇ ಪರಿಗಣಿಸುವುದಾಗಿ ಹೇಳಿದರು.
ಮೋದಿ ಅವರು ಗುರುವಾರ ಬೆಳಗ್ಗೆ ಗುರೆಜ್ಗೆ ಬಂದರು. ಈ ಭೇಟಿಯನ್ನು ಮೊದಲೇ ಘೋಷಿಸಲಾಗಿರಲಿಲ್ಲ. ಗುರೆಜ್ ಕಣಿವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಸೇನೆಯ ಯೋಧರ ಜತೆ ಅವರು ಎರಡು ತಾಸು ಕಳೆದರು. ಗುರೆಜ್ ಕಣಿವೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಮೀಪದಲ್ಲಿಯೇ ಇದೆ. ಭಾರತದೊಳಕ್ಕೆ ನುಸುಳುವ ಉಗ್ರರ ಜತೆ ಇಲ್ಲಿ ಕಳೆದ 27 ವರ್ಷಗಳಿಂದ ನಿರಂತರ ಗುಂಡಿನ ಚಕಮಕಿ ನಡೆಯುತ್ತಲೇ ಇದೆ.
ಯೋಧರಿಗೆ ಸಿಹಿ ಹಂಚಿ, ಪ್ರಧಾನಿ ಶುಭಾಶಯ ಹೇಳಿದರು. ‘ಎಲ್ಲರ ಹಾಗೆ ನಾನು ಕೂಡ ಕುಟುಂಬದ ಜತೆಗೆ ದೀಪಾವಳಿ ಆಚರಿಸಲು ಬಯಸುತ್ತೇನೆ. ಹಾಗಾಗಿ ಕುಟುಂಬ ಎಂದು ನಾನು ಪರಿಗಣಿಸುವ ಯೋಧರ ಬಳಿಗೆ ಬಂದಿದ್ದೇನೆ’ ಎಂದು ಹೇಳಿದರು. ಯೋಧರ ಜತೆ ಸಮಯ ಕಳೆಯುವುದರಿಂದ ತಮಗೆ ಹೊಸ ಚೈತನ್ಯ ದೊರೆಯುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.