ADVERTISEMENT

ಸೋನಿಯಾ ವೈದ್ಯಕೀಯ ವೆಚ್ಚ ಪಡೆದಿಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST
ಸೋನಿಯಾ ವೈದ್ಯಕೀಯ ವೆಚ್ಚ ಪಡೆದಿಲ್ಲ
ಸೋನಿಯಾ ವೈದ್ಯಕೀಯ ವೆಚ್ಚ ಪಡೆದಿಲ್ಲ   

ನವದೆಹಲಿ (ಪಿಟಿಐ): `ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸರ್ಕಾರದಿಂದ ಯಾವುದೇ ವೈದ್ಯಕೀಯ ವೆಚ್ಚವನ್ನು ಪಡೆದಿಲ್ಲ~ ಎಂದು ಕೇಂದ್ರ ಮಾಹಿತಿ ಆಯೋಗ ಸ್ಪಷ್ಟಪಡಿಸಿದೆ.

`ಸೋನಿಯಾ ತಮ್ಮ ವೈದ್ಯಕೀಯ ವೆಚ್ಚವನ್ನು ಪಾವತಿಸುವಂತೆ ಸರ್ಕಾರಕ್ಕೆ ಯಾವುದೇ `ವೈದ್ಯಕೀಯ ಬಿಲ್~ಗಳನ್ನು ಸಲ್ಲಿಸಿಲ್ಲ~ ಎಂದು ಮಾಹಿತಿ ಆಯೋಗದ ಆಯುಕ್ತ ಸತ್ಯಾನಂದ ಮಿಶ್ರಾ ಅವರು ಹೇಳಿದ್ದಾರೆ. 

 `ಸೋನಿಯಾ ಗಾಂಧಿ ಅವರ ಆರೋಗ್ಯ ತಪಾಸಣೆಗಾಗಿ ಸರ್ಕಾರ ಭರಿಸಿದ ವೈದ್ಯಕೀಯ ವೆಚ್ಚ~ದ ಕುರಿತು ಮಾಹಿತಿ ಒದಗಿಸುವಂತೆ ಮೊರಾದಾಬಾದ್‌ನ ನವೀನ್ ಕುಮಾರ್ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತ ಮಿಶ್ರಾ, `ಸೋನಿಯಾ ಗಾಂಧಿ ಅವರು ವೈದ್ಯಕೀಯ ವೆಚ್ಚ ಭರಿಸುವಂತೆ ಕೋರಿ ಸರ್ಕಾರಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ. ಸರ್ಕಾರ ಕೂಡ ಯಾವುದೇ ವ್ಯಕ್ತಿಯ ವೈದ್ಯಕೀಯ ವೆಚ್ಚ ಭರಿಸಲು ಹಣವನ್ನು ನೀಡಿಲ್ಲ~ ಎಂದು ಮೇ 3ರಂದು ಮಾಹಿತಿ ನೀಡ್ದ್ದಿದರು. ಯಾವುದೇ ವ್ಯಕ್ತಿಯ ವೈಯಕ್ತಿಕ ವೈದ್ಯಕೀಯ ಖರ್ಚು, ವೆಚ್ಚಗಳ ವಿವರಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸ್ದ್ದಿದರು.

ಗುಜರಾತ್‌ನ ಜೆಸರ್‌ನಲ್ಲಿ ರ‌್ಯಾಲಿಯೊಂದರಲ್ಲಿ ಸೋಮವಾರ ಸೋನಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದ ಮುಖ್ಯಮಂತ್ರಿ ನರೇಂದ್ರ ಮೋದಿ, ಸೋನಿಯಾ ವಿದೇಶ ಪ್ರವಾಸಗಳಿಗಾಗಿ ಸರ್ಕಾರದಿಂದ ರೂ 1,880 ಕೋಟಿ  ಹಣ ಪಡೆದಿದ್ದಾರೆ~ ಎಂದು  ಆರೋಪಿಸಿದ್ದರು.

ಪ್ರತಿಕ್ರಿಯೆಗೆ ಸೋನಿಯಾ ನಕಾರ
ರಾಜ್‌ಕೋಟ್‌ನಲ್ಲಿ ಬುಧವಾರ ಪಕ್ಷ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನರೇಂದ್ರ ಮೋದಿ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, `ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ತೀರ್ಮಾನ ತೆಗೆದುಕೊಂಡರೂ ಎಲ್ಲ ರೀತಿಯ ಆರೋಪಗಳನ್ನು ಎದುರಿಸಬೇಕಾಗುತ್ತದೆ. ನನ್ನ ವಿರುದ್ಧದ ಇಂತಹ ವೈಯಕ್ತಿಕ ಆರೋಪಗಳ ಬಗ್ಗೆ ನಾನು ಹಿಂದೆಯೂ ತಲೆ ಕೆಡಿಸಿಕೊಂಡಿಲ್ಲ. ಮುಂದೆಯೂ ಆ ಬಗ್ಗೆ ಗಮನ ಹರಿಸುವುದಿಲ್ಲ~ ಎಂದು  ತಿರುಗೇಟು ನೀಡಿದರು.

ಬೋಧನೆ, ಪಾಲನೆಯಲ್ಲಿ ವ್ಯತ್ಯಾಸ: ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ, `ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಅವರ ಬೋಧನೆ ಮತ್ತು ಪಾಲನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ~ ಎಂದು ಲೇವಡಿ ಮಾಡಿದರು. ಎಂಟು ವರ್ಷಗಳಿಂದ ಗುಜರಾತ್ ಸರ್ಕಾರ ಲೋಕಪಾಲರನ್ನು ನೇಮಕ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.

`ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧವಿಲ್ಲ, ಕಾಂಗ್ರೆಸ್ ವಿರುದ್ಧವಿದ್ದಾರೆ. ಸಂಸತ್ ಕಲಾಪ ನಡೆಯಲು ಬಿಡದ ಅವರು ಸರ್ಕಾರ, ಈ ದೇಶದ ಸಂವಿಧಾನ ಅಥವಾ ಪ್ರಜಾಪ್ರಭುತ್ವದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆಯೇ ಎಂಬುವುದನ್ನು ಜನರೇ ತೀರ್ಮಾನಿಸಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.