ADVERTISEMENT

‘ಸ್ಕೀಂ’ ಅರ್ಥ ಕೇವಲ ಮಂಡಳಿ ರಚಿಸುವುದಲ್ಲ: ‘ಸುಪ್ರೀಂ’

ಪಿಟಿಐ
Published 2 ಏಪ್ರಿಲ್ 2018, 19:50 IST
Last Updated 2 ಏಪ್ರಿಲ್ 2018, 19:50 IST

ನವದೆಹಲಿ: ‘ಕಾವೇರಿ ನದಿ ನೀರಿನಲ್ಲಿ ತಮಿಳುನಾಡಿಗೆ ಹಂಚಿಕೆಯಾದ ಪಾಲನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸೋಮವಾರ ಭರವಸೆ ನೀಡಿರುವ ಸುಪ್ರೀಂ ಕೋರ್ಟ್‌, ‘ನೀರು ಹಂಚಿಕೆಗಾಗಿ ಯೋಜನೆ (ಸ್ಕೀಂ) ರೂಪಿಸುವುದು ಎಂದರೆ ಕೇವಲ ನಿರ್ವಹಣಾ ಮಂಡಳಿ ರಚಿಸುವುದಲ್ಲ’ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಸ್ಕೀಂ ರೂಪಿಸಲು ನೀಡಲಾಗಿದ್ದ ಗಡುವು ಮುಗಿದರೂ ಕ್ರಮ ಕೈಗೊಳ್ಳದೆ ಅಸಹಕಾರ ತೋರುತ್ತಿದೆ ಎಂದು ದೂರಿ, ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು ಎಂಬ ತಮಿಳುನಾಡಿನ ಮನವಿ
ಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು, ಏ.9ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

ನೀರು ಹಂಚಿಕೆ ಮಾಡಿ ಕಳೆದ ಫೆ. 16ರಂದು ನೀಡಿರುವ ಅಂತಿಮ ತೀರ್ಪಿನಲ್ಲಿ ಸೂಚಿಸಿರುವಂತೆ ಆರು ವಾರಗಳೊಳಗೆ ‘ಸ್ಕೀಂ’ ರೂಪಿಸುವಲ್ಲಿ ಕೇಂದ್ರ ಕ್ರಮ ಕೈಗೊಂಡಿಲ್ಲ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲಾಗಿಲ್ಲ ಎಂದು ತಮಿಳುನಾಡು ಪರ ವಕೀಲ ಜಿ.ಉಮಾಪತಿ ಪೀಠಕ್ಕೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.