ADVERTISEMENT

ಸ್ತಬ್ಧಗೊಂಡ ಆಂಧ್ರಪ್ರದೇಶ

ರಾಯಲ ತೆಲಂಗಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಹೈದರಾಬಾದ್‌: ರಾಯಲ ತೆಲಂಗಾಣ ಪ್ರಸ್ತಾವ ವಿರೋಧಿಸಿ ರಾಷ್ಟ್ರೀಯ ತೆಲಂಗಾಣ ಸಮಿತಿ, ಟಿಜೆಎಸಿ ಮತ್ತು  ಎಸ್‌ಜೆಎಸಿ ಗುರುವಾರ ಆಂಧ್ರಪ್ರದೇಶ ಬಂದ್‌ಗೆ ಕರೆ ನೀಡಿದ್ದರಿಂದ ರಾಜ್ಯದಾದ್ಯಂತ ಜನಜೀವನ ಸ್ತಬ್ದಗೊಂಡಿತ್ತು.

ರಾಜಧಾನಿ ಹೈದರಾಬಾದ್‌ನಲ್ಲಿ ಮಾತ್ರ ಬಂದ್‌ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಯಿತು. ತೆಲಂಗಾಣ ಭಾಗದಲ್ಲಿ ಸಾರಿಗೆ ಸೇವೆ ಸಂಪೂರ್ಣ ಸ್ಥಗಿತಗೊಂ­ಡಿದ್ದರಿಂದ ಪ್ರಯಾಣಿಕರು ಪರದಾ­ಡಿದರು.

ಹೈದರಾಬಾದ್‌ನಿಂದ ತೆಲಂಗಾಣ ಮತ್ತು ಸೀಮಾಂಧ್ರಕ್ಕೆ ಬಸ್‌ ಸೇವೆ ಸ್ಥಗಿತ­ಗೊಳಿಸಬೇಕು ಎಂದು ಪ್ರತಿಭಟನಾ­ಕಾ­ರರು ಆಗ್ರಹಿಸಿದ್ದರಿಂದ ಅಂತರ್‌ ಜಿಲ್ಲಾ ಬಸ್‌ ಸೇವೆಯಲ್ಲೂ ತೊಂದರೆ ಉಂಟಾ­ಯಿತು. ಮೇದಕ್‌, ಕರೀಂನಗರ್‌, ನಿಜಾಮಾ­ಬಾದ್‌, ಆದಿಲಾಬಾದ್‌, ನಲಗೊಂಡ, ಮಹಬೂಬ್‌ನಗರ, ವರಾಂಗಲ್‌ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಅಂಗಡಿ–ಮುಂಗಟ್ಟುಗಳನ್ನು ಬಂದ್‌ ಆಗಿದ್ದರಿಂದ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

19 ಗಣಿಯ 20 ಸಾವಿರ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ 40,000 ಸಾವಿರ ಟನ್‌ ಕಲ್ಲಿದ್ದಲು ಉತ್ಪಾದನೆಗೆ ತೊಂದರೆಯಾಯಿತು.

ಸಂಯುಕ್ತ ಆಂಧ್ರಕ್ಕೆ ಎಐಡಿಎಂಕೆ ಮತ್ತು ಡಿಎಂಕೆ ಬೆಂಬಲ ಕೋರಲು ಚೆನ್ನೈಗೆ ಹೋಗಿ ಮರಳಿದ್ದ ವೈಎಸ್‌ಆರ್‌ ಕಾಂಗ್ರೆಸ್‌ನ ಅಧ್ಯಕ್ಷ ಜಗನ್ಮೋಹನ ರೆಡ್ಡಿ ಬೆಂಗಾವಲು ಪಡೆಯ ಮೇಲೆ ರಾಜೇಂದ್ರ ನಗರ ಬಳಿ ವಿದ್ಯಾರ್ಥಿಗಳು ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆದರು.

ತೀವ್ರ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕಡಪಾ ಸಂಸದ ರೆಡ್ಡಿ ಅವರ ವಾಹನವನ್ನು ತಡೆಯಲು ಯತ್ನಿಸಿದರು. ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

ಪೊಲೀಸರ ಮೇಲೆ ಕಲ್ಲು ತೂರಾಟ
ಹೈದರಾಬಾದ್‌ (ಪಿಟಿಐ): ತೆಲಂಗಾಣ ಪರ ರ್‍್ಯಾಲಿ ಆಯೋ­ಜಿಸಲು ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಇಲ್ಲಿಯ ಉಸ್ಮಾನಿಯಾ ವಿಶ್ವವಿದ್ಯಾ­ಲಯದ ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು.

ರಾಯಲ್‌ ತೆಲಂಗಾಣ ಪ್ರಸ್ತಾವ ವಿರೋಧಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಕರೆ ನೀಡಿದ ಬಂದ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಯೋ­ಜಿಸಿದ ರ್‍್ಯಾಲಿಯನ್ನು ತಡೆದಾಗ ಘರ್ಷಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ರ್‍್ಯಾಲಿ ತಡೆದಿದ್ದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ವಿವಿ ಆವರಣದಲ್ಲಿದ್ದ ಬ್ಯಾರಿಕೇಡ್‌ಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು. ಈ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಚದುರಿಸಲು  ಅಶ್ರುವಾಯು ಪ್ರಯೋಗಿ­ಸಲಾಯಿತು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT