ADVERTISEMENT

ಸ್ವದೇಶಕ್ಕೆ ಕಪ್ಪು ಹಣ: ಸರ್ಕಾರದ ನಿಲುವಿಗೆ ಅಡ್ವಾಣಿ ತೀವ್ರ ನಿರಾಸೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ತೀವ್ರ ನಿರಾಸೆಯಾಗಿದೆ ಎಂದಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಕಳೆದ ವರ್ಷ ಕೇಂದ್ರ ಹೊರಡಿಸಿದ ಶ್ವೇತಪತ್ರದಲ್ಲಿ ನೀಡಿರುವ ಭರವಸೆ ಈಡೇರಿಸುವ ಬಗ್ಗೆ ಖಾತ್ರಿಪಡಿಸಬೇಕೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಬುಧವಾರ ಒತ್ತಾಯಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಹೊರಡಿಸಿದ್ದ ಶ್ವೇತಪತ್ರದಲ್ಲಿ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ ನಿಟ್ಟಿನಲ್ಲಿ ಯಾವುದೇ ಕಾರ್ಯ ನಡೆದಿಲ್ಲ ಎಂದು ತಮ್ಮ ಬ್ಲಾಗ್‌ನಲ್ಲಿ ಅಡ್ವಾಣಿ ವಿಷಾದ ವ್ಯಕ್ತಪಡಿಸಿದ್ದಾರೆ.

`ಅಂದು ಹಣಕಾಸು ಸಚಿವರಾಗಿ ಶ್ವೇತಪತ್ರ ಮಂಡಿಸಿದ್ದ ಪ್ರಣವ್ ಮುಖರ್ಜಿ, ಇಂದು ಅದಕ್ಕಿಂತ ಎತ್ತರದ (ರಾಷ್ಟ್ರಪತಿ) ಸ್ಥಾನದಲ್ಲಿದ್ದಾರೆ. ಆದ್ದರಿಂದ ಅಂದು ಅವರು ನೀಡಿರುವ ಭರವಸೆ ಈಡೇರಿಸುವ ಬಗ್ಗೆ ಖಾತ್ರಿ ನೀಡಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಕಪ್ಪು ಹಣದ ವಿವರ ಸಂಗ್ರಹಿಸಲು ರಚಿಸಲಾಗಿದ್ದ ಮೂರು ಸಮಿತಿಗಳು ಸಹ ಇಲ್ಲಿಯವರೆಗೆ ಯಾವುದೇ ವರದಿ ಸಲ್ಲಿಸಿಲ್ಲ. ಶಕ್ತಿಶಾಲಿ ರಾಷ್ಟ್ರಗಳಾದ ಅಮೆರಿಕ, ಜರ್ಮನಿ ಹಾಗೂ ಚಿಕ್ಕರಾಷ್ಟ್ರಗಳಾದ ನೈಜೀರಿಯಾ, ಪೆರು ಮತ್ತು ಫಿಲಿಪ್ಪೀನ್ಸ್ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಪ್ಪು ಹಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

`ಸ್ವಿಸ್ ಬ್ಯಾಂಕ್ ಮತ್ತು ಹೊರರಾಷ್ಟ್ರಗಳಲ್ಲಿ ಅಕ್ರಮವಾಗಿ ಹಣ ಕೂಡಿಟ್ಟಿರುವ ಬಗ್ಗೆ ಬಂದ ವರದಿಗಳನ್ನು ನೋಡಿದ್ದೇವೆ. ಆದರೆ, ಆ ದೇಶಗಳಿಂದ ಒಂದು ಪೈಸೆಯೂ ನಮ್ಮ ದೇಶಕ್ಕೆ ತಂದಿರುವ ಬಗ್ಗೆ ಕೇಳಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.